Tuesday, July 5, 2016

ಚಿಂತನೆ "ಬೇಕು ಎಳೆ ಕಂದಮ್ಮಗೆ ಹೆತ್ತೊಡಲ ಹಿತನುಡಿ"




ಸಾಮಾನ್ಯವಾಗಿ ತಾಯಿಯ ಉದರದಿಂದ ಜನಿಸುವ ಮಗು ತಾಯಿಯ ಬೆಚ್ಚನೆಯ ಮೈ ತಾಗುವವರೆಗೆ ಅಳುತ್ತಿರುತ್ತದೆ. ಎಲೆಕಂದಮ್ಮಗೆ ತಾಯಿ ತನ್ನನ್ನು ಕಾಪಾಡಬಲ್ಲ ಶಕ್ತಿವಂತೆ ಎಂದು ಆಕೆಯ ಗರ್ಭದಿಂದ ಈ ಭೂಮಿಗೆ ತಲೆಹಾಕಿ ಪ್ರವೇಶ ಪಡೆದಾಗಲೇ ಅರಿವಾಗುತ್ತದ್ತೆ. ವಿದೇಶಿಯರು ಆಗ ತಾನೇ ಜನಿಸಿದ ಮಗುವನ್ನು ತಾಯಿಯ ಬರಿ ಎದೆಯ ಮೇಲೆ ಕವಚಿ ಹಾಕುತ್ತಾರೆ. ತಾಯಿಯ ಎದೆಯಲ್ಲಿ ಮಗುವಿಗೆ ಸುರಕ್ಷತೆಯ ಭಾವ ಉಂಟಾಗುವುದರಿಂದ ಈ ಜಾಗ್ರತೆ. ಮುಂದೆ ಆ ಎಳೆ ಮಗು ತಾಯಿಯ ಬೆಚ್ಚನೆಯ ಮಡಿಲಲ್ಲಿ ಸುಖವಾಗಿ ಪವಡಿಸುತ್ತದೆ. ತನ್ನ ಬೇಕು ಬೇಡಗಳನ್ನು ಪೂರೈಸ ಬಲ್ಲವಳು, ತನ್ನನ್ನು ಕೆಟ್ಟಜನರಿಂದ ರಕ್ಷಿಸಬಲ್ಲವಳು ತನ್ನ ತಾಯಿ ಎಂದು ಮಗುವಿಗೆ ಯಾರೂ ಹೇಳಿಕೊಡಬೇಕಾಗಿಲ್ಲ.  ಮಗು ತನ್ನಿಂತಾನೇ ಅರಿತುಕೊಳ್ಳುತ್ತದೆ. ತಾಯಿಯನ್ನು ಒಂದರೆಗಳಿಯೂ ಬಿಟ್ಟಿರಲು ಮಗು ಒಪ್ಪುವುದಿಲ್ಲ. ಅಳುವಿನ ಮೂಲಕ ಅದು ತನ್ನ ಭಾವನೆಗಳನ್ನು ವ್ಯಕ್ತ ಪಡಿಸುತ್ತದೆ.

 ಮಗು ಪುಟ್ಟ ಹೆಜ್ಜೆ ಇಡಲು ಆರಂಭಿಸುವಾಗ ತಾಯಿ ಮಗುವಿಗೆ ಮಗುವಿನ ಭಾಷೆಯಲ್ಲಿ ದೇವರಿಗೆ ನಮಸ್ಕಾರ ಮಾಡಲು ಹೇಳುತ್ತಾಳೆ. “ಚಾಮಿ ಮಾಡು ಮಗಾ...ಚಾಮಿ ಮಾಡು....” ಎನ್ನುತ್ತಾಳೆ. ಮಗು ಚಾಮಿ ಮಾಡುತ್ತದೆ. ತಾಯಿ ಖುಷಿಪಡುತ್ತಾಳೆ. ತಾಯಿ ಖುಷಿಪಟ್ಟಳೆಂದು ಮಗುವು ಕೇಕೇ ಹಾಕಿ ಖುಷಿ ಪ್ರದರ್ಶಿಸುತ್ತದೆ. ತಾನು ಏನೋ ಘನಕಾರ್ಯ ಮಾಡಿದೆನೆಂದು!

ಆ ಮಗುವಿಗೆ ತಾನು ‘ಚಾಮಿ’ ಮಾಡಿದ್ದು ಯಾರಿಗೆಂದು ತಿಳಿಯದು. ಅದು ಆದೇಶದ ಪಾಲನೆ ಮಾತ್ರ ಮಾಡಿದೆ. ಅದು ನಮಸ್ಕಾರ ಮಾಡಿದುದ ನೋಡಿ ಅದರ ತಾಯಿ ಸಂಭ್ರಮಿಸುತ್ತಾಳೆ. ತಾಯಿಯ ಸಂಭ್ರಮ ನೋಡಿ ಮಗು ಸಂತೋಷ ಪಡುತ್ತದೆ.

ಮಗು ಬೆಳೆಯುತ್ತಾ ತಾಯಿಯ ಆದೇಶ ಹೆಚ್ಚಾಗುತ್ತದೆ. ದಿನಾ ಮನೆಯಲ್ಲಿ ದೇವರಿಗೆ ನಮಸ್ಕಾರ ಮಾಡಿಸುತ್ತಾಳೆ. ಹಬ್ಬ ಹರಿದಿನಗಳಲ್ಲಿ ದೇವಸ್ಥಾನಕ್ಕೆ, ಚರ್ಚ್, ದರ್ಗಾಕ್ಕೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಹುಂಡಿಗೆ ಹಣ ಹಾಕಿಸುವುದನ್ಕುನು ರೂಢಿಮಾಡಿಸುತ್ತಾಳೆ. ಯಾತ್ರಾ ಸ್ಥಳಗಳಿಗೆ ಕರೆದುಕೊಂಡು ಹೋಗಿ ಕ್ಯೂ ನಲ್ಲಿ ನಿಲ್ಲಿಸಿ ದೇವರ ದರ್ಶನ ಮಾಡಿಸುತ್ತಾಳೆ. ತಾಯಿಗಾಗಿ ಮಗು ಅನುಕರಣೆ ಮಾಡುತ್ತದೆ. ಈ ಸಂದರ್ಭದಲ್ಲೆಲ್ಲ ಮಕ್ಕಳು  ಗೊಂದಲದಲ್ಲಿ ಇರುತ್ತಾರೆ. ನಮಸ್ಕಾರ ಮಾಡಿ ದೇವರಲ್ಲಿ ಏನು ಬೇಡಿದೆ ಎಂದರೆ ಏನಿಲ್ಲ ಎಂದು ಹೇಳುತ್ತಾರೆ. ಬೇಡಿದುದನ್ನು ಕೊಡಲು ತಾಯಿ ಇದ್ದಾಳೆ. ಮತ್ತೆ ತಂದೆ ಇದ್ದಾನೆ. ಇನ್ನು ದೇವರೆಂದರೆ ಏನು? ಯಾರು? ತಾಯಿಯೇ ಎಲ್ಲವನ್ನೂ ಕೊಡುವವಳು. ತಪ್ಪಿದರೆ ತಂದೆ ಕೊಡುತ್ತಾನೆ. ಮತ್ತೆ ಈ ದೇವರೇನು ಮಾಡುತ್ತಾರೆ? ಇತ್ಯಾದಿ ಪ್ರಶ್ನೆಗಳು ಮಗುವಿನಲ್ಲಿ ಏಳುತ್ತವೆ.

ಮಗು ಬೆಳೆದಂತೆ ಇನ್ನೂ ಹೆಚ್ಚಾಗಿ ಮಗುವಿಗೆ ದೇವರ ಸ್ಮರಣೆ ಮಾಡಲು ತಿಳಿಸುತ್ತಾಳೆ. “ನಾನು ಬಾಲ್ಯದಲ್ಲಿ ಕನ್ನಡ ಭಜನೆ ಹಾಡಿದ್ದೆ. ತುಳು ಮಾತೃಭಾಷೆಯವಳಾದ ನನಗೆ ಆಗಿನ್ನೂ ಕನ್ನಡ ತಿಳಿದಿರಲಿಲ್ಲ. ನೆನಪಿನ ಶಕ್ತಿಯಿಂದ ಬಾಯಿಪಾಠಮಾಡಿದ ಹಾಡನ್ನು ಹಾಡಿದ್ದೆ. “ತಿರುಪತಿ ವೆಂಕಟ ರಮಣಾ ನಿನಗೇತಕೆ ಬಾರದು ಮರಣ” ಎಂದಾಗ ಬಳಿ ಇದ್ದ ನನ್ನ ಹಿರಿಯಣ್ಣ ನನ್ನ ತಲೆಗೆ “ಟಪ’ ಎಂದು ಕುಟ್ಟಿ ಕೊಟ್ಟರು. “ಕರುಣ” ಎಂದು ಹೇಳಾಬೇಕಾದಲ್ಲಿ ‘ಮರಣ’ ಎಂದು ಹೇಳಿದ್ದೆ. ಪ್ರಾಸಕ್ಕೆ ಮಾತ್ರ ನನ್ನ ಗಮನ ಇದ್ದಿರಬೇಕು.

ಹೀಗ ದೇವರ ಬಗ್ಗೆ ಪಾಠ ಮಾಡುವ ತಾಯಿ ಮುಂದೆ ದೇವರಿಗೆ ಹರಕೆ ಹಾಕಿದರೆ ದೇವರುನ ನಿನ್ನ /ನಮ್ಮ ಕೆಲಸ ಮಾಡಿಕೊಡುತ್ತಾನೆ ಎಂಬ ಭಾವನೆಯನ್ನು ಮಗುವಿನಲ್ಲಿ ಬಿತ್ತುತ್ತಾಳೆ. ಬುದ್ಧಿವಂತ ಮಕ್ಕಳಿಗೆ ತಡವಾಗಿಯಾದರೂ ಇದು ಕಾಣದ ದೇವರಿಗೆ ನೀಡುವ ಲಂಚ ಇರಬಹುದು ಎಂದೆನಿಸಿದರೆ ತಪ್ಪಿಲ್ಲ.  ಈ ರೀತಿ ದೇವರ ಭಯ ಭಕ್ತಿಯನ್ನು ಪಾಠಮಾಡುವ ತಾಯಿ, ಮಗುವಿಗೆÀ ನೈತಿಕ ಪಾಠ ಮಾಡುವುದೇ ಇಲ್ಲ. ಈ ಸಮಾಜದಲ್ಲಿ ಜೀವಿಸುವಾಗ ಮಗುವಿನ ನಡತೆ ಹೇಗಿರಬೇಕು ಎಂದು ತಿಳಿ ಹೇಳುವುದಿಲ್ಲ. ಅನ್ಯರಿಗೆ ಉಪಕಾರ ಮಾಡದಿದ್ದರೂ ಸರಿ, ಅನ್ಯರಿಗೆ ಅಪಕಾರ ಮಾಡದಿರಬೇಕೆಂಬ ಎಚ್ಚರವನ್ನೂ ತಾಯಿ ಹೇಳದಿದ್ದರೆ ಆ ಮಗುವಿಗೆ ಈ ಪಾಠಮಾಡುವವರು ಯಾರು?

ಮತ್ತೊಬ್ಬರ ಕಷ್ಟಕ್ಕೆ ನಾವು ಸ್ಪಂಧಿಸದಿದ್ದರೆ ನಮ್ಮ ಕಷ್ಟಕ್ಕೆ ಬೇರೆಯವರು ಸ್ಪಂಧಿಸಲು ಹೇಗೆ ಸಾಧ್ಯ?

ಕ್ರಿ.ಶಕ 1410ರ ವಿಜಯನಗರದ ಶಾಸನದಲ್ಲಿ ಉಲ್ಲೇಖಗೊಂಡಿರು ವಿಷಯ ಹೀಗಿದೆ.  
ಲಕ್ಷ್ಮೀಧರ ದೇವರಾಯನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ. ಅವನು ತೊಡೆಯ ಮೇಲಿರುವಾಗಲೇ ಕೆರೆ ಕಟ್ಟಿಸುವ ಬಾವಿಯನ್ನು ತೋಡಿಸುವ, ದೇವಾಲಯವನ್ನು ಕಟ್ಟಿಸುವ, ಕಷ್ಟದಲ್ಲಿ ಸಿಕ್ಕಿರುವ ಅನಾಥರನ್ನು  ಬಿಡಿಸುವ ಮಿತ್ರರಿಗೆ ಆಸರೆ ನೀಡುವ, ನಂಬಿದವರಿಗೆ ಆಶ್ರಯ ನೀಡುವ ಕಿವಿಮಾತನ್ನು ಕೇಳಿದ್ದ.

 ಆ ತಾಯಿ ಮಗುವಿಗೆ ಹೇಳುವ ಮಾತು ಇಂದಿಗೂ ಎಲ್ಲಾ ತಾಯಿಯಂದಿರಿಗೂ ಆದರ್ಶ. ಅವಳಂತೆಯೇ ತನ್ನ ಮಗುವಿಗೆ ಎಲ್ಲರೂ ಹಿತೋಪದೇಶÀ ಮಾಡಿದ್ದೇ ಆದರೆ ನಮ್ಮ ದೇಶ ಅಭಿವೃದ್ಧಿ ಶೀಲ ದೇಶಗಳ ಮುಂದೆ ತಲೆಯೆತ್ತಿ ನಿಲ್ಲುತ್ತಿತ್ತು. ಮತ್ತೊಬ್ಬರ ನೋವಿಗೆ ಸ್ಪಂಧಿಸುತ್ತಿತ್ತು.

15ನೆಯ ಶತಮಾನ ಆಳರಸರ ಕಾಲ. ಅರಸರಿಗೆ ಮಾತ್ರ ಪ್ರಭುತ್ವದಲ್ಲಿ ಅಧಿಕಾರ ಇದ್ದ ಕಾಲ. ಆದರೂ ಸಾಮಾನ್ಯ ತಾಯಿಯೊಬ್ಬಳು ತನ್ನ ಮಗುವಿಗೆ ಜನೋಪಯೋಗಿ ಕಾರ್ಯ ಮಾಡಲು ಬೋಧಿಸುತ್ತಾಳೆ. ಈಗ ಪ್ರಜಾ ಪ್ರಭುತ್ವ ಕಾಲ. ಯಾರೂ ಬೇಕಾದರೂ ಪ್ರಭುಗಳು ಆಗಬಹುದಾದ ಕಾಲ. ಈಗಿನ ತಾಯಂದಿರು ತಮ್ಮ ಮಕ್ಕಳಿಗೆ ಇಂತಹ ಬೋಧನೆ ಮಾಡಿರುತ್ತಿದ್ದರೆ ಅರಸರಾದ ಪ್ರಜೆಗಳು ದೇಶವನ್ನು ಚೆನ್ನಾಗಿ ಮುನ್ನಡೆಸುತ್ತಿದ್ದರು. ಆದರೆ ತಾಯಿ ಬೆಳೆಸುದರಲ್ಲಿ ಇರುವ ದೋಷವೋ ಏನೋ ಕೆರೆ ಕಟ್ಟಿಸುವ, ಬಾವಿ ತೋಡಿಸುವ ಬದಲು ಕೆರೆಗಳನ್ನು ನುಂಗುವವರೇ ಹೆಚ್ಚಾಗಿದ್ದಾರೆ ಇಂದು.

 ಮಕ್ಕಳನ್ನು ಬೆಳೆಸುವಾಗಲೇ ಕೆಲವು ನೀತಿ ಮಾತುಗಳನ್ನು ಅವರ ವಯಸ್ಸಿಗನುಗುಣವಾಗಿ  ಹೇಳಬೇಕಾಗುತ್ತದೆ. ದೇವರಿಗೆ ನಮಸ್ಕಾರ ಮಾಡಲು ಹೇಳುವ ಮೊದಲು ಸಮಾಜಕ್ಕೆ ಉಪಕಾರಿಯಾಗು ಎಂದು ಹೇಳುವ ಅಗತ್ಯ ಇದೆ.

ಕಣ್ಣೆದುರು ನಡೆವ ಅಪಘಾತದಲ್ಲಿ ಜೀವವುಳಿಸಲು ಚಡಪಡಿಸಿ ಬೇಡುವವರನ್ನು ಆಸ್ವತ್ರೆಗೆ ಸೇರಿಸಿ ಅವರ ಜೀವ ಉಳಿಸು, ನಗರಗಳ ವಾಹನ ಸಂಚಾರದ ನಡುವೆ ತುರ್ತುಚಿಕಿತ್ಸಾ ವಾಹನಕ್ಕೆ ದಾರಿ ನೀಡಿ ನಿನ್ನ ವಾಹನವನ್ನು ಬದಿಗೆ ಸರಿಸಿ ನಿಲ್ಲು ಎಂದು ಬುದ್ದಿ ಹೇಳುವ ಅಗತ್ಯ ಇದೆ.
 ಜನೋಪಕಾರಿ ಕೆಲ¸ಗಳನ್ನೂ ಮಾಡಲು ತನ್ನ ಕಂದನಿಗೆ ಪ್ರೀತಿಯಿಂದ ಹೆತ್ತ ತಾಯಿ ತಿಳಿ ಹೇಳಿದ್ದೇ ಆದರೆ ನಮ್ಮ ಜನರಲ್ಲಿ ಪರೋಪಕಾರತ್ವ ಗುಣ ಬೆಳೆಯುವುದರಲ್ಲಿ ಸಂದೇಹ ಇಲ್ಲ.

No comments:

Post a Comment