Sunday, February 28, 2016

ಪುರುಷ ಪ್ರಧಾನ ಮೌಲ್ಯಗಳೊಂದಿಗೆ ಸಿರಿಯ ಸಂಘರ್ಷ



(ಯುಜಿಸಿ ಅನುದಾನಿತ ಉಪನ್ಯಾಸ:


29-1-2016- ಮುಲ್ಕಿ ಸುಂದರರಾಮ ಶೆಟ್ಟಿ ಕಾಲೇಜ್ ಶಿರ್ವ)

ಸಿರಿ ಎನ್ನುವ ಪದಕ್ಕೆ ಅನೇಕ ಅರ್ಥವ್ಯಾಪ್ತಿ ಇದ್ದರೂ ಒಟ್ಟಾರೆ ಅರ್ಥ ‘ಸಿರಿ’ ಎಂದರೆ ಸಮೃದ್ಧಿ, ಅಭಿವೃದ್ಧಿ, ಫಲವಂತಿಕೆಯನ್ನು ಸೂಚಿಸುತ್ತದೆ.

ತುಳುನಾಡಿನಲ್ಲಿ ಸಿರಿಪಠ್ಯದ ಕಥಾನಾಯಕಿ ಸಿರಿ ಅಲ್ಲದೆ ಅತಿಕಾರೆ ಭತ್ತದ ಪ್ರಾತಿನಿಧಿಕ ಜೋಡಿ ಸಿರಿಗಳ ಉಪಾಸನೆಯೂ ನಡೆಯುತ್ತದೆ.  ಮಾತ್ರವಲ್ಲ ಅನೇಕ ಕನ್ಯಾಸಿರಿಗಳ ಉಪಾಸನೆಯ ಮಾತೃನೆಲ ತುಳುನೆಲ.
ಸಿರಿ ಪಾಡ್ದನವು ವಿಶ್ವ ಜಾನಪದ ಕಾವ್ಯದಲ್ಲಿ ಎರಡನೆಯ ಸ್ಥಾನವನ್ನು ಗಳಿಸಿದೆ

ಪ್ರಸ್ತುತ ಸಂದರ್ಭದಲ್ಲಿ ಸಿರಿ ಪಾಡ್ಪದನ ಪಠ್ಯದ ಸಿರಿಯು ಪುರುಷ ಪ್ರಧಾನ ಸಮಾಜದಲ್ಲಿ ಎದುರಿಸಿದ ಸವಾಲುಗಳನ್ನು ಶೀನಪ್ಪ ಹೆಗ್ಗಡೆ, ಅಮೃತ ಸೋಮೆಶ್ವರ, ಎ.ವಿ ನಾವಡರು ಸಂಪಾದಿಸಿದ ರಾಮಕ್ಕ ಮುಗೆರ್ದಿ ಹಾಡಿದ ಪಾಡ್ದನ, ಅಶೋಕ ಆಳ್ವರವರು ಸಂಪಾದಿಸಿದ ಕರ್ಗಿ ಸೆಡ್ತಿ ಹಾಡಿದ ಪಾಡ್ದನ, ಬಿ.ಎ. ವಿವೇಕ ರೈ ಮತ್ತು ಬಳಗ ಅವರು ಸಂಪಾದಿಸಿದ ಕ್ಷೇಮಕಲ್ಲ ಪಂಜುರ್ಲಿ ಪಾಡ್ದನ -ಇಷ್ಟು ಪಾಡ್ದನಗಳನ್ನು ಹಿನ್ನೆಲೆಯಾಗಿಟ್ಟು ಚರ್ಚೆಗೆ ಎತ್ತುಕೊಂಡಿದ್ದೇನೆ.

ಬೇರೆ ಬೇರೆ ಪಾಡ್ದನಗಳಲ್ಲಿ ಸಿರಿಯ ಜನನದ ನಿರೂಪಣೆಯಲ್ಲಿ ಅಲ್ಪ ಸ್ವಲ್ಪ ಭಿನ್ನತೆ ಇದ್ದರೂ ಎಲ್ಲಾ ಪಾಡ್ದನಕಾರರ ಪ್ರಕಾರ
 ಸಿರಿ ಸತ್ಯ/ಶಕ್ತಿಲೋಕದಿಂದ (ಬ್ರಹ್ಮರ ಗುಂಡದಿಂದ/ಹುತ್ತದಿಂದ) ಕನ್ಯೆಯಾಗಿ ಪ್ರಕಟಗೊಂಡವಳು. ಸಿರಿಯನ್ನು
ತಂದೆ ಬಿತ್ತಿಲ್ಲ ತಾಯಿ ಹೆತ್ತಿಲ್ಲ.

ಪಿಂಗಾರದ ಪುಷ್ಪದಲ್ಲಿ, ಕುಂಕುಮದ ಹರಳಿನಲ್ಲಿ, ಗಂಧದ ಗುಳಿಗೆಯಲ್ಲಿ ಕನ್ಯೆರೂಪದಲ್ಲಿ ಸಿರಿ ಒಮ್ಮಲೆ ಪ್ರಕಟಗೊಂಡವಳು.

ಅವಳ ಬಾಲ್ಯದ ಬಗ್ಗೆ ಪಾಡ್ದನಗಳು ಮೌನವಾಗಿವೆ.
ಮಾಮೂಲಿ ಹೆಣ್ಣಿನಂತೆ ಅವಳನ್ನು ಯುವಕ ಕಾಂತಾಳ್ವನಿಗೆ ವಿವಾಹ ಮಾಡಿಕೊಡಲಾಗುತ್ತದೆ.
ವಿವಾಹಾನಂತರ ಕೂಡಾ ಬಯಕೆಯ ದಿನದ ವರೆಗೆ ಸಿರಿಯ ಸಂಘರ್ಷ ದಾಖಲಾಗಿಲ್ಲ.
ಬಯಕೆಯ ದಿನ ಆಕೆ ಗಂಡನ ಸೂಳೆಯ ಸಂಘವನ್ನು ನೆರೆದ ಅತಿಥಿಗಳ ಮುಂದೆ ಬಯಲುಗೊಳಿಸಿದ ರೀತಿ
ಸಿರಿಯ ಕಥೆಯನ್ನು ಬೆಳೆಸುತ್ತದೆ.
ಮುಂದೆ ಅವಳು ಎದುರಿಸುವ ಸನ್ನಿವೇಶಗಳನ್ನು ಹೀಗೆ ಪಟ್ಟಿ ಮಾಡಬಹುದು.

ಸಿರಿಯ ಸಂಘರ್ಷ ಸನ್ನಿವೇಶ 1
ಸಿರಿ ಗಂಡನ ಸೂಳೆಸಂಗವನ್ನು ಪ್ರಶ್ನಿಸಿದ ಸಂದರ್ಭ

ಸಿರಿಯ ಸಂಘರ್ಷ ಸನ್ನಿವೇಶ 2
ಸಿರಿಯು ಅಜ್ಜನ ಶವವನ್ನು ತಾನೇ ಹೊತ್ತು ಶವಸಂಸ್ಕಾರ ಮಾಡಿದ ಸಂದರ್ಭ

ಸಿರಿಯ ಸಂಘರ್ಷ ಸನ್ನಿವೇಶ 3
ಪತ್ತೆರಿ ಕೂಟದವರು ಸಿರಿಯನ್ನು ಕಟುಮಾತುಗಳಿಂದ ನಿಂದಿಸುವ ಸನ್ನಿವೆಶ.

ಸಿರಿಯ ಸಂಘರ್ಷ ಸನ್ನಿವೇಶ 4
ಸಿರಿಯು ತನ್ನ ಗಂಡ ಕಾಂತು ಪೂಂಜನಿಂದ ಬರ ಪಡೆಯುವ ಸನ್ನಿವೇಶ.

ಇಷ್ಟಲ್ಲದೆ ಲೋಕನಾಡಿನ ನಾಗೋಜಿ ಬ್ರಾಹ್ಮಣನ ದೂಷಣೆ, ಓಡದ ಕುಂಞನ ದೂಷಣೆಯಲ್ಲಿಯೂ ಸಿರಿಯು ಕಟುಮಾತುಗಳನ್ನು ಕೇಳುತ್ತಾಳೆ.

ಸಿರಿ ಕಾವ್ಯದಲ್ಲಿ “ಸಂಬರ್ ಮೀರಿ ಕಜಿಪು .... ತಮೆರಿ ಮೀರಿ ಪೊಣ್ಣು .... ದಾಡೆ ಮೀರಿ ದೋಡೆ ..... ಪೊಣ್ಣಗ್ ಅರಸ್ತನನಾ ...” ಎಂಬಿತ್ಯಾದಿ ಬೈನುಡಿಗಳು ಹೆಣ್ಣಿನ ಸ್ವಾತಂತ್ರ್ಯದ ಮಿತಿಯನ್ನು ಸೂಚಿಸುತ್ತವೆ.
ಭಿನ್ನ ಪಾಡ್ದನಗಳಲ್ಲಿ ಕೂಡಾ ಸಿರಿಗೆ ಹೇಳುವ ಬೈನುಡಿ ಕಟುವಾಗಿಯೇ ಇದೆ. ಹಾಗೂ ಅಷ್ಟೇ ಗಟ್ಟಿಯಾಗಿ  ಸಿರಿಯ ಪ್ರತಿಭಟಣೆಯು ದಾಖಲಾಗಿದೆ. ಪಾಡ್ದನದ ಉದ್ದೇಶವೇ ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಗಳ ನಿರಾಕರಣೆ ಎಂಬಂತೆ ಪಾಡ್ದನದುದ್ದಕ್ಕೂ ಸಿರಿಯ ಪ್ರತಿಭಟಣೆ ಎದ್ದುಕಾಣುತ್ತದೆ. ಅಚ್ಚರಿ ಹುಟ್ಟಿಸುತ್ತದೆ.

ಸಿರಿಯ ಸೀಮಂತದ ವರೆಗೆ ಅವಳ ಗಂಡನ ಮನೆಯಲ್ಲಿ ಅವಳ ಸಂಘರ್ಷ ಕರ್ಗಿ ಸೆಡ್ತಿ ಹಾಡಿದ ಪಾಡ್ದನದಲ್ಲಿ ಮಾತ್ರ ನಿರೂಪಿಸಲಾಗಿದೆ.
ಅಶೋಕ ಆಳ್ವ ಅವರು ಸಿರಿ ಕಾವ್ಯಗಳ ತುಲನಾತ್ಮಕ ವಿಮರ್ಶೆ ನಡೆಸುತ್ತಾ ಹೀಗೆ ಬರೆಯುತ್ತಾರೆ.
“ಸಿರಿಯ ಸೀಮಂತದ ಸೀರೆಯೊಡನೆ ಸೂಳೆ ಸಿದ್ಧುವಿನಲ್ಲಿಗೆ ಹೋದ ಕಾಂತುಪೂಂಜನ ಕೈಯಿಂದ ಸಿದ್ದು ಸೀರೆ ತೆಗೆದುಕೊಂಡು ಉಡುತ್ತಾಳೆ. ಆಳ್ವ (ಪೂಂಜ) ಅದನ್ನು ನೋಡಿ ‘ಮಾನ ತೆಗೆದೆ’ ಎಂದು ಹೇಳುತ್ತಾನೆ. ಸಿದ್ದು ಹಿಂದಿನಂತೆಯೇ ಮಡಚಿ ಮರಳಿ ಕೊಡುತ್ತಾಳೆ. ಆಳ್ವ (ಪೂಂಜ) ಸೀರೆಯನ್ನು ತಂದು ಕಬ್ಬಿಣದ ಕಲೆಂಬಿಯಲ್ಲಿಡುತ್ತಾನೆ. ಇಲ್ಲಿ ಕಾಂತುಪೂಂಜ ಸಂಕರು ಪೂಂಜೆದಿಯರಿಬ್ಬರೂ ಸೀಮಂತ ಮಾಡಲು ಹಿಂಜರಿಯುವ ಬಗ್ಗೆ ಹೇಳಲಾಗಿದೆ ಮತ್ತು ಆ ಮೂಲಕ ಸೀಮಂತಕ್ಕೆ ಮೊದಲೇ ಸಿರಿಗೆ ಗಂಡ ಮತ್ತು ಅತ್ತೆಯ ಜೊತೆಯಲ್ಲಿ ನೆಮ್ಮದಿಯ ಸಂಸಾರ ಇರಲಿಲ್ಲ ಎಂಬುದನ್ನು ಹೇಳಲಾಗಿದೆ.
“ಮುಪ್ಪ ಮುಡಿ ಬಾಕ್ಯಾರ್‍ದ ಬತ್ತ ಲತ್ತ್‍ದ್ ಪೋವು
ಮುಪ್ಪ ಮುಡಿ ಕಂಬ್ಲದ ಅರಿಬಾರ್  ಉಂಡುದು ಪೋವು
 (ಮೂವತ್ತು ಮುಡಿ ಬಾಕಿಮಾರಿನ ಭತ್ತ ಅಳೆದು ಹೋದೀತು
ಮೂವತ್ತು ಮುಡಿ ಕಂಬಳದ ಅಕ್ಕಿ ಭತ್ತ ಉಂಡು ಹೋದೀತು) ಎನ್ನುತ್ತಾರೆ ಸಂಕರು ಪೂಂಜೆದಿ.

ಸಿರಿಗೆ ಈ ವಿಷಯ ತಿಳಿಯುತ್ತದೆ. ತನ್ನ ಸತ್ಯನಾಪುರದರಮನೆಯಿಂದ ‘ಹೊರೆ’ ತಂದ ಆಳುಗಳನ್ನು ಬಸಲೂರಿನಲ್ಲಿ ಏನೂ ತೆಗೆದುಕೊಳ್ಳದೆ ಹಿಂದಿರುಗಲು ಸೂಚಿಸುತ್ತಾಳೆ.

“ನಿಕುಲು ತೆಲಿಕ್ಕ್ ಉಂತಡೆ ಗಂಜಿಗ್ ಕುಲ್ಲಡೆ ನುಪ್ಪು ಉನಡೆ
ಬತ್ತ ಪತ್ತಡೆ ಎನ್ನ ಚಾಕಿರಿದ ಜೋಕುಲಾಂಡ ಮಗಾ ಪುದೆ ಜಾಲೆ ಪಿರಪೋಲೆ”  ಎನ್ನುತ್ತಾಳೆ ಸಿರಿ. (ಪು. 65)
(ನೀವು ಗಂಜಿನೀರ್‍ಗೆ ನಿಲ್ಲಬೇಡಿ, ಗಂಜಿಗೆ ಕೂರಬೇಡಿ ಅನ್ನ ಉಣ್ಣ ಬೇಡಿ
ಭತ್ತ(ಪಡಿ) ಹಿಡಿಯಬೇಡಿ ನನ್ನ ಚಾಕರಿಯ ಮಕ್ಕಳಾದರೆ ಮಗಾ ಹೊರೆ ಇಳಿಸಿ ಮರಳಿ ಹೋಗಿ)
ಈ ಭಾಗ ಬೇರೆ ಯಾವ ಪಾಡ್ದನದಲ್ಲೂ ಇಲ್ಲ.

ಸಿರಿಯ ಸಂಘರ್ಷ ಘಟನೆ 1
ಸಿರಿ ಗಂಡನ ಸೂಳೆಸಂಗವನ್ನು ಪ್ರಶ್ನಿಸಿದ ಸಂದರ್ಭ
ಮೊತ್ತ ಮೊದಲಿಗೆ ಸಿರಿಯು ಬಯಕೆಯ ಸೀರೆಯನ್ನು ನಿರಾಕರಿಸುವುದು ಬಹಳ ಸೂಕ್ಷ್ಮಸನ್ನಿವೇಶದಲ್ಲಿ. ಅದುವರೆಗೆ ಅವಳ ಗಂಡ ಕಾಂತು ಪೂಂಜನ ಸೂಳೆ ಸಂಗದ ಮಾತು ಬರುವುದಿಲ್ಲ. ಗಂಡನ ಸೂಳೆ ಸಿದ್ದು ಉಟ್ಟು ಮಾಸಿದ ಮೈಲಿಗೆ ಸೀರೆಯನ್ನು ಸತ್ಯ(ಶಕ್ತಿ)ದ ಮಗಳು ತಾನು ಮೈಗೆ ಹಾಕಲಾರೆ ಎಂದು ನೆರೆದ ಸಭೆಯ ಮುಂದೆ ಹೇಳುತ್ತಾಳೆ.  ರಾಮಕ್ಕ ಮುಗೆರ್ದಿಯ ಪಾಡ್ದನದಲ್ಲಿ, ಸೇರಿದ ಸಭೆಯ ಮಂದಿ ಕೂಡಾ ಸಿರಿಯನ್ನು ದಂಡಿಸುತ್ತಾರೆ. (ಕೂಡುದಿ ಮಂದಿ ಸಿರಿನ್ ದಂಡ್ಯಾವರ್‍ಗೆನಾ...) ಆಗ  ‘ಒಮ್ಮೆ ಸೀರೆಗೆ ಕೈಕೊಟ್ಟು ನನ್ನ ಮಾನ ಉಳಿಸು” ಎಂದು ಅಂಗಾಲಾಚುತ್ತಾರೆ ಸಿರಿಯ ಅಜ್ಜ. ಗಿಡೆಗೆರೆ ರಾಮಕ್ಕ ಮುಗೆರ್ದಿಯ ಪಾಡ್ದನದಲ್ಲಿ ಈ ಭಾಗ ಸುಂದರವಾಗಿ ಕಾವ್ಯಾತ್ಮಕವಾಗಿ ನಿರೂಪಿತವಾಗಿದೆ. ಅಜ್ಜ ಬೆರ್ಮಾಳುವರು ಅವಳಲ್ಲಿ ಸೀರೆ ಪಡೆಯಲು ಒತ್ತಾಯಿಸುತ್ತಾರೆ. ಆಗ ಸಿರಿ ಎಡಕೈಯಿಂದ ಪೂಸೀರೆ ಪಡೆದು ತಾನು ಕುಳಿತು ಕೊಳ್ಳಬೇಕಾಗಿದ್ದ ದಂಡಿಗೆಯ ಮೇಲೆ ಆ ಸೀರೆಯನ್ನು ಬೀಸಿ ಹರಡುತ್ತಾಳೆ:

‘ಈತ್ ಪಾತೆರ ಪಂಡಿನ ಸಿರಿ ದತ್ತ್ ಕೈಯಿಟ್ ಪಟ್ಟೆಗೆ ಕೈ ಕೊರಿಯೆರ್
ತಾನು ಕುಲ್ಲು ಸತ್ಯ ದಂಡಿಗೆದ ಕೊಂಬುಗು ದೆತ್ತ್ ಪಾರಾಯೆರ್ ಪಟ್ಟೆನ್
ಉಂದು ಕಡೆರಿ ಕಾರ್ಲದ ಕೊಡಿ ಕಂಬುಲದ ಸೂಳೆ ಸಿದ್ದುನ ಪಟ್ಟೆಗೆನಾ
ಸಾವಿರ ಮಾನ್ಯ ತುತುದಿನ ಸೂಳೆ ಸಿದ್ದುನ ಪಟ್ಟೆಗೆನಾ ಉಂದು
ಇನಿ ಎನ್ನ ಎಚ್ಚಿಗ್ ಯಾನ್ ಈ ಸೀರೆನ್ ಪಾಡಾಯೆ ಅಜ್ಜೆರೇ
ಇನಿಯಾನ್ ತುತುದಿನ ಪಟ್ಟೆಡೇ ಎಂಕ್ ತಮ್ಮಾನ...” (ಪು.71)”

(ಇಷ್ಟು ಮಾತು ಹೇಳಿದರು ಸಿರಿ ಎಡ ಕೈಯಲ್ಲಿ ಪಟ್ಟೆಯನ್ನು ಹಿಡಿದರು
ತಾನು ಕೂರುವ ಸತ್ಯ ದಂಡಿಗೆಯ ‘ಕೊಂಬಿಗೆ’ ಎತ್ತಿ ಹಾರಿಸಿದರು.
ಇದು ಕಡೆರಿ ಕಾರ್ಲದ ಕೊಡಿ ಕಂಬುಲದ ಸೂಳೆ ಸಿದ್ದುನ ಪಟ್ಟೆಯಾ
ಸಾವಿರ ಮನುಷ್ಯರು ಉಟ್ಟ ಸೂಳೆ ಸಿದ್ದುವಿನ ಪಟ್ಟೆಯಾ
ಇದನ್ನು ನನ್ನ ಮೈಮೇಲೆ ಹಾಕಲಾರೆ..’  ಎನ್ನುತ್ತಾಳೆ.

ಕರ್ಗಿಸೆಡ್ತಿ ಹಾಡಿದ ಪಾಡ್ದನದಲ್ಲಿ ಸಿರಿ ಸೀಮಂತ ಮುಗಿಸಿ ತವರಿಗೆ ಹೊರಡುವಾಗ ತಾನು ಕುಳಿತ ದಂಡಿಗೆಗೆ ಆಕೆಯ ಗಂಡ ಕಾಂತುಪೂಂಜ ಹೆಗಲು ಕೊಟ್ಟು ಎಬ್ಬಿಸಬೇಕು ಎನ್ನುವ ಸನ್ನಿವೇಶ ನಿರೂಪಿತವಾಗಿದೆ. ಆಗ ಕಾಂತು ಪೂಂಜ ಅವಳ ಮಾತನ್ನು ನಿರಾಕರಿಸಿ ಹೋಗುತ್ತಾನೆ. ಅದಕ್ಕೆ ಸಿರಿಯ ಪ್ರತಿಕ್ರಿಯೆ ಹೀಗಿದೆ:

“ನಾರಾಯಿನ ಅಂಜೋವೆ ದಂಡಿಗೆನೆಂಚ ಕಲ್ಲ್ ಮಲ್ತೆನೋ
ಕೈಕೊರಿ ದೋಸೊಂದು ತೂಡ್ಡಯೆನಣ್‍ಂಜೋವೆ
ಕಲ್ಲ್ ಮಲ್ತ್‍ರ್‍ವೇನ್ ಹಾಂಕಾರದ ಆಣ್‍ಂಜೋವೆ ಈರ್
ಮೀಸೆ ಕೊಂದು ಪುಟ್ಟಿನಣ್‍ಂಜೋವೆ ಎದೆಟ್ಟ್ ಮಿರೆ ಕೊಂಡು ಪುಟ್ಟಿ ಮಗಳ್ ಯಾನ್‍ಲಾ”-(ಅಶೋಕ ಆಳ್ವ  ಪು.66)
(“ನರಾಯಿನ ಗಂಡುಸೇ ದಂಡಿಗೆಯನ್ನು ಕಲ್ಲು ಮಾಡಿಯೇನು.
 ಕೈಹಿಡಿದ ದೋಷ ಎಂದು ನೋಡಲಾರೆ ಕಲ್ಲು ಮಾಡಿಯೇನು
ಅಹಂಕಾರದ ಗಂಡುಸೇ, ಮೀಸೆ ಹೊಂದಿ ಹುಟ್ಟಿದ ಗಂಡುಸೇ
ಎದೆಯಲ್ಲಿ ಮೊಲೆಹೊಂದಿ ಹುಟ್ಟಿದ ಹೆಣ್ಣು ನಾನೂ...)  ಸಿರಿ ಗಂಡನಿಗೆ ಅಹಂಕಾರದ ಗಂಡುಸೇ..ಎನ್ನುವ ಮಾತು ಧ್ವನಿಪೂರ್ಣವಾಗಿದೆ.

ಘಟನೆ 2
ಅಜ್ಜ ಬಿರ್ಮಾಳುವರ ಮರಣದ ಸಂದರ್ಭ:
ಸತ್ಯನಾಪುರದ ಉತ್ತರಾಧಿಕಾರಿ ತಾನಾಗಬೇಕು ಇಲ್ಲವಾದರೆ ಅಜ್ಜನ ಶವ ಎತ್ತಲು ಬಿಡಲಾರೆ ಎಂದು ಸಿರಿಯ ಮುಂದೆ ಸೂಡದ ಅನ್ನು ಸೆಟ್ಟಿ ಮಗ ಶಂಕರಾಳ್ವ ಹೇಳುವಾಗ ಸಿರಿ ಕೆರಳಿ ಸಿಡಿಗುಂಡಿನಂತೆ ಸಿಡಿಯುತ್ತಾಳೆ:

“ಯಾನ್ ಪೊಣ್ಣುಗೆನಾ ಸಂಕಾರಾಲುವ ಈ ಆಣ್‍ಗೆನಾ
ಇನಿ ಯೆನ್ನ ತರೆಟ್‍ಗೆನಾ ಅಜ್ಜೇರೆನ್ ಕೊನೊದುಗೆನ
ಅಕ್ಕಸೊಗು ಪುಗೆ ಬೂಮಿಗ್ ಬುಗುತ್ತಿನ ಮಲ್ಪುನ
ಪೊರ್ಲು ಪೋಲ್ಯ ತೂಲಾಂದ್ ಪಂಢೇರ್‍ಗೆನಾ” (ರಾಮಕ್ಕ ಮುಗೇರ್ತಿ. ಪು.94)

(ನಾನು ಹೆಣ್ಣು ಸಂಕರಾಳುವ ಗಂಡು ನೀನು
ಇಂದು ನನ್ನ ತಲೆಯ ಮೇಲೆ ಅಜ್ಜನನ್ನು ಹೊತ್ತು
ಆಕಾಶಕ್ಕೆ ಹೊಗೆ, ಭೂಮಿಗೆ ವಿಭೂತಿ ಮಾಡುವ
ಚಂದ ನೋಡು”  ಎನ್ನುತ್ತಾ ಜಯವುಳ್ಳ ಬೆರ್ಮರನ್ನು ನೆನೆಯುತ್ತಾಳೆ.
ಈ ಸಂದರ್ಭದಲ್ಲಿ ಸಿರಿಯ ಅಲೌಶಕ್ತಿಯ ಪ್ರದರ್ಶನವಾಗುತ್ತದೆ. ಆಕೆಯ ಆಶಯದಂತೆ ಸತ್ಯನಾಪುರದಲ್ಲಿ ಅಜ್ಜನಿಗೆ ಕಾಟ/ಚಿತೆ ಸಿದ್ಧವಾಗುತ್ತದೆ.  ಸಿರಿ ತಾನೇ ತಲೆಯ ಮೇಲೆ ಹೊತ್ತು ಅಜ್ಜನ ಶವಸಂಸ್ಕಾರ ಮಾಡುತ್ತಾಳೆ.

ಘಟಣೆ 3
 ಪತ್ತೇರಿ ಕೂಟಕ್ಕೆ ಸಿರಿಗೆ ಕರೆ
ಪುರುಷ ಪ್ರಧಾನ ಪತ್ತೇರಿ ಕೂಟ (ಕಾಪ್ ಪಂಚಾಯಿತಿಯಂತೆ)  ಸತ್ಯನಾಪುರದ ಸಿರಿಯ ಹಕ್ಕನ್ನು ಶಂಕರಾಳ್ವನಿಗೆ ಕೊಡುವ ಉದ್ದೇಶದಿಂದ ಸಿರಿಯನ್ನು ಅಪರಾಧಿಯಂತೆ  ಕೂಟದ ಕಳಕ್ಕೆ ಕರೆಸುತ್ತದೆ.
ಅಪರಾಧಿ  ಮಹಿಳೆಯಂತೆ ಪತ್ತೇರಿ ಕೂಟದ ಕಳಕ್ಕೆ ಸಿರಿ ಹೋಗುತ್ತಾಳೆ. ಸಿರಿಯನ್ನು ಗೌರವಯುತವಾಗಿ ಕೂಟದ ಕಲದ ಪಾಲವರು ಎದುರ್ಗೊಳ್ಳುತ್ತಾರೆ ಹಾಗೂ ಕೂರಲು ಆಸನ ತೋರಿಸುತ್ತಾ,
“ಯೆಂಕಲೆನ ತಂಗಾಡಿ ಮರ್ಮಾಲ್ ಬೇತೆ ಅತ್ತ್ ಸಿರಿಯೇ ಈ ಬೇತೆ ಅತ್ತ್‍ಗೆನ
   ಕೂಟದ ಕಲಕ್‍ಗೆನಾ ಬರೊಡು ಬತ್ತ್ ಕುಲ್ಲೊಡುಗೆನಾ
  ನಾಯ ನನ್ನಿತ ಮದಿಪೋಡುಂದುದು
  ಪತ್ತ್ ಕೂಡಿ ಪಾಲವೆರ್ ಸಿರಿನ್ ಬಾಮಿಪುನಗಗೆನ
ಸಿರಿ ಏಲೇಲ್ ಪತ್ತ್ ಪದಿನಾಜಿ ಲೋಕದ ಗಿಂಡೆ ಕೋಪ ಕೋಪಿವೆರೋ ಓ...”

 (ನಮ್ಮ ಸೋದರಿಯರು, ಸೊಸೆಯರು ಬೇರೆ ಅಲ್ಲ, ಸಿರಿಯೇ ನೀನು ಬೇರೆ ಅಲ್ಲವೇ
 ಕೂಟದ ಕಲಕ್ಕೆ ಬರಬೇಕು ಬಂದು ಕುಳಿತುಕೊಳ್ಳಬೇಕು
 ನ್ಯಾಯ ಸತ್ಯ ಅರುಹಬೇಕು
 ಎಂದು ಹತ್ತುಜನ ಪಾಲವರು ಸಿರಿಯನ್ನು ಬಾಮಿಸುವಾಗ
 ಸಿರಿಯು ಏಳೇಳು ಹತ್ತು ಹದಿನಾರು ಲೋಕದ ಕೋಪವನ್ನು ಕೋಪಿಸುತ್ತಾಳೆ)
 ಬಳಿಕ ಪತ್ತೇರಿ ಕೂಟದ ಪಾಲವರ ಬಳಿ ಸಿರಿ ಕೇಳುತ್ತಾಳೆ, )

“ಎನಲೆಕ್ಕಂತಿ ತಂಗಡಿ ಮರ್ಮಾಲೆರೆನ್
 ನಿಗಲೆನ ಬೆರಿಟ್ ಕಟೊಂದು
ಪತ್ತ್ ಕೂಡಿ ಕೂಟದ ಕಲಕೊ ಲೆತ್ತ್ ಕೊನಬೈದರಂದೇ”
(ನನ್ನಂತಹ ಸೋದರಿ ಸೊಸೆಯರನ್ನು
 ನೀವು ಬೆನ್ನಿಗೆ ಕಟ್ಟಿಕೊಂಡು (ಜೊತೆಗೆ)
ಹತ್ತು ಮಂದಿ ಸೇರಿದ ಕೂಟದ ಕಳಕ್ಕೆ  ಕರೆದು ಬಂದಿರುವಿರೆ?”) (ಗಿಡಿಗೆರೆ, ಪು.98)

ಆಗ  ಪಾಲವರು ಸಿರಿಗೆ ಮನೆಯ ಒಳಗಿನ ವ್ಯವಹಾರ ನೋಡಲು ಹೀಗೆ ಕೂಟದ ಕಳದ ನಿರ್ಣಯ ಹೇಳುತ್ತಾರೆ:
“ಇನಿ ಏರ್ ಸತ್ಯಮಾಲೋಕಂದ ಸಿರಿಯೇ ಕೇಂಡರಗೆನ
ಇನಿಡ್ದ್ ಸತ್ಯನಾಪುರದ ಏಲಿಕೆ ಲೆಕ್ಕ ಪತ್ರಗೆನ
ಸೂಡೊಡು ಪುಟ್ಟಿನ ಸೂಡದ ಅಣ್ಣುಸೆಟ್ಟಿ ಮಗ ಸಂಕರಾಲ್ವಗ್ ಕೊರೊಡು
ಅಪಗ ಸಂಕಾರು ಆಲುವೆ ಪಣ್ಪೆಗೆನ
ಉಲಾಯಿದ ಏಲಿಕೆ ಈಯ್ಯೇ ತೂವೊಂದು ಉಪ್ಪೊಡು ಸಿರಿಯ್ಯೇಂದ್ ಪಣ್ಪೇರ್”
(ಇಂದು ಯಾರು ಸತ್ಯಮಹಾಲೋಕದ ಸಿರಿಯೇ ಕೇಳಿದಿರಾ
 ಇಂದಿನಿಂದ ಹೊರಗಿನ ವ್ಯವಹಾರ ಲೆಕ್ಕ ಪತ್ರಗಳು
ಸೂಡದಲ್ಲಿ ಜನಿಸಿದ ಅಣ್ಣುಸೆಟ್ಟಿ ಮಗ ಸಂಕರಾಲ್ವಗೆ ಕೊಡಬೇಕು
 ಆಗ ಸಂಕಾರು ಅಲುವ ಹೇಳುವರು
(ಒಳಗಿನ ಏಲಿಕೆ ವ್ಯವಹಾರ ನೀನೇ ನೋಡಿಕೊಂಡಿರಬೇಕು ಸಿರಿಯೇ)

ಆಗ ಸಿರಿಯು "ಒಂದು ಒಡೆದ ಮಡಿಕೆಯಲ್ಲಿ ಎರಡು ನಾಯಿಗಳು ಒಟ್ಟಿಗೆ ಗಂಜಿನೀರು ನೆಕ್ಕವು"  ಎನ್ನುತ್ತಾ ‘ಹತ್ತು ಕೂಡಿ ಪಾಲವರನ್ನೂ ಸಂಕರಾಲ್ವನನ್ನೂ ಕೂಟದ ಕಲದಲ್ಲಿಯೇ ಕಲ್ಲುಮಾಡಿಯೇನು” ಎಂದು ಒಲ್ಲು ಎತ್ತಿ ಬಿಸಾಕಲು ಎತ್ತಿದಾಗ ಕೂಟದ ಪಾಲವರು ಅವಳ ಬಳಿ ಕ್ಷಮೆಯಾಚಿಸುತ್ತಾರೆ. ಕೂಟದ ಕಲ ವಿಸರ್ಜಿಸುತ್ತಾರೆ. (ಅದೇ ಪು 99)

 ಅಮೃತ ಸೋಮೇಶ್ವರರ ಪಾಡ್ದನದಲ್ಲಿ , ಅರಮನೆಯ ಆಡಳಿತ ಇತ್ಯಾದಿ ತನಗಲ್ಲದೆ ಅನ್ಯರಿಗೆ ಬಿಟ್ಟುಕೊಡಲಾರೆ ಎಂಬ ಸಿರಿಯ ಧೃತಿಗೆಡದ ನುಡಿಗೆ ಪಾಲವರು ಹೇಳುತ್ತಾರೆ,
“ಆವ ಸಮಯೊಡು ಪತ್ತ್ ಪಾಲವೆರ್
ಪೊಣ್ಣಗ್ ಪಟ್ಟ ಕೊರ್‍ಂಡ ಪೊಣ್ಣರತನ ನಡತ್ ಪೋವುಂದು
ಅವು ಆಪುಜಿ ಸಿರಿಯೆಂದ್ ಕೂಡಿ ಪಾಲವೆರ್ ಪನ್ಪೆರ್‍ಯೇ
ಅವು ಎನ್ನ ಅಜ್ಜೆರೆನ ಅರಮನೆದ ಪಟ್ಟ ಎಂಕತ್ತಂದೆ
ಪಿದಯಿದ ಜನೊಕು ಯಾನ್ ಬುಡುಕೊರಯೆಂದ್
ಮೂಜಿ ಮೂಜಿ ಪಾತೆರ ಪಂಡೆರೆ ಸಿರಿ
ಅಪಗ ಪನ್ಪೇರ್ ಪಾಲವೆರ್ ಏರ್‍ಯೇ ಸಿರಿಯೆ
ಈ ದಾಡೆ ಮೀರಿ ದೋಡೆಯೇ ತಮೆರಿದಾಂತಿ ಪೊಣ್ಣುಯೆ
ನಿಕ್ಕ್ ಪೊಣ್ಣರತನನಯಾ ಸಿರಿಯೆಂದ್ ಒಂಡೆರ್ ” (ತುಳು ಪಾಡ್ದನ ಸಂಪುಟ ಪು. 177)

(ಆ ಸಮಯದಲ್ಲಿ ಹತ್ತು ಪಾಲವರು
 ಹೆಣ್ಣಿಗೆ ಪಟ್ಟ(ಸಿಂಹಾಸನ)ನೀಡಿದರೆ ಹೆಣ್ಣಾಳಿಕೆ ನಡೆಯಬಹುದು
 ಅದಾಗದು ಸಿರಿಯೇ, ಕೂಡಿ ಪಾಲವರು ಹೇಳುವರು
 ಅವು ನನ್ನ ಅಜ್ಜನ ಅರಮನೆಯ ಪಟ್ಟ ನನಗಲ್ಲದೆ
 ಹೊರಗಿನ ಜನಕ್ಕೆ ನಾನು ಬಿಟ್ಟುಕೊಡಲಾರೆ ಎಂದು
 ಮೂರು ಮೂರು ಮಾತು ಹೇಳಿದರು ಸಿರಿ
ಆಗ ಹೇಳುತ್ತಾರೆ ಪಾಲವರು ಯಾರು ಸಿರಿ
ನೀನು ‘ದಾಡೆ ಮೀರಿದ ದೋಡೆ’ಯೇ ತಮೆರಿ ಇಲ್ಲದ ಹೆಣ್ಣು
ನಿನಗೆ ಹೆಣ್ಣಾಳ್ವಿಕೆಯೇ ಸಿರಿ ಎಂದು ಕೇಳಿದರು)

ಇದರಿಂದ ಕಡುರೋಷಗೊಂಡು “ಓ ನಾರಾಯಿನಾ ಆಣ್‍ಂಜೋವೇ..” (ಓ ನಾರಾಯಿನ ಪುರುಷರೇ ...” ಎನ್ನುತ್ತಾ ಕೆರಳಿ “ಇಂತಹ ನ್ಯಾಯದ ಕಟ್ಟೆಗೆ ನನಗೆ ಬರಹೇಳಿದಿರಾ ?” ಎಂದು ಪ್ರಶ್ನಿಸುತ್ತಾಳೆ.
ಈ ರೀತಿಯ ಪಂಚಾಯತಿಯ ಕೂಟದ ಕಳವೇ ತನಗೆ ಬೇಡವೆಂದು ಕಳ ಇಳಿದು ಹೋಗುತ್ತಾಳೆ.

ಕರ್ಗಿಸೆಡ್ತಿ ಪಾಡ್ದನದಲ್ಲಿ `ಓ ನಾರಾಯಿನ ಪುರುಷರೇ ಕೇಳಿದಿರೇ....’ ಎಂದು ಸಿರಿ ಪ್ರಯೋಗಿಸುವ ಭಾಷೆ ಉದ್ದೇಶಪೂರ್ವಕವಾಗಿ ಇದ್ದಂತೆ ಇದೆ. `ನಾಲ್ಕೂರ ಗುರಿಕಾರರು ಎಂಟು ಮಾಗಣೆಯ ಪಾಲವರು’ ಎಲ್ಲರೂ ಪುರುಷರು. ಈ ಕೂಟ ಪುರುಷರ ಕೂಟ. ಇಲ್ಲಿ ಅಪರಾಧಿ ಮಹಿಳೆಯರಿಗೆ ಮಾತ್ರ ಪ್ರವೇಶ. ಆಳುವ ಮನೆಗಳಲ್ಲಿ ಪುರುಷರು ಇಲ್ಲವಾದರೂ ಆ ಆಳುವ ಮನೆಯ ಸಹೋದರ ಗುತ್ತಿನ ಯಜಮಾನ ಪುರುಷ, ಕೂಟದ ಕಳಕ್ಕೆ ಆಳುವ ಮನೆಯನ್ನು ಪ್ರತಿನಿಧಿಸಿ ಹೋಗುವುದು ಪದ್ಧತಿ. ಆಳುವ ಮನೆಯಲ್ಲಿ ಪುರುಷ ಸಂತಾನ ಇಲ್ಲವಾದರೂ ಆ ಮನೆಯ ಪಿರಿಯರಸಿ, ಪಟ್ಟದಬ್ಬೆಗೂ ಕೂಟದ ಕಳಕ್ಕೆ ಪ್ರವೇಶ ಇಲ್ಲ.
ಹೆಣ್ಣಾಳ್ವಿಕೆಯನ್ನು ಮಾತೃಸಂಸ್ಕøತಿಯ ಪುರುಷರು ಒಪ್ಪಲು ಸಿದ್ಧರಿಲ್ಲ. ಅಂದೂ ಒಪ್ಪಿಲ್ಲ. ಇಂದೂ ಒಪ್ಪುವುದಿಲ್ಲ. ಸಿರಿ ಪಾಡ್ದನದಲ್ಲಿ ಸಿರಿಯು ಈ ಪುರುಷ ಪರ ವ್ಯವಸ್ಥೆಯನ್ನು ಪ್ರತಿಭಟಿಸುತ್ತಾಳೆ. ಅವಳ ಪ್ರತಿಭಟಣೆಯ ಉಗ್ರತೆಯನ್ನು ಗಮನಿಸಿದರೆ ಅದುವರೆಗೆ ಹೆಣ್ಣಾಳ್ವಿಕೆಯು ತುಳುನಾಡಿನಲ್ಲಿ ಇತ್ತೇನೋ ಎಂಬ ಸಂದೇಹ ಉಂಟಾಗುತ್ತಿದೆ. ಆದರೂ ಕೂಟದ ಕಳದವರು ಸಿರಿಯ ಹಕ್ಕನ್ನು ಮಾನ್ಯ ಮಾಡುವುದಿಲ್ಲ.

ಘಟನೆ 5
ಗಂಡನ ಹಂಗು ತೊರೆಯುವುದು
 ಶೀನಪ್ಪ ಹೆಗ್ಗಡೆಯವರ ಕಥಾಭಾಗದಲ್ಲಿ ಸತ್ಯನಾಪುರ ತೊರೆದು ಲಂಕೆಲೋಕನಾಡಿನ ಹರಕೆ ತೀರಿಸಿದ ಕೂಡಲೇ ಸಿರಿ, “ಎತ್ತು ನೊಗದಲ್ಲಿ ಹೆಣ್ಣು ಗಂಡನ ಬರದಲ್ಲಿ ಸಿಕ್ಕಿಕೊಂಡಿರಬಾರದು.”  ಎನ್ನುವ ಮಾತಿದೆ.

ಗಿಡಿಗೆರೆಯವರ ಪಾಡ್ದನದಲ್ಲಿ ಕಾಂತುಪೂಂಜ ಸಿರಿಯನ್ನು ಬೈಯ್ಯುವ ಸನ್ನಿವೇಶ ಇದೆ.
“ದಾಡೆ ಕಲೆಯಿ ದೋಡೆಂದ್‍ಂಡ ಈಯ್ಯೆನ್ನ ಸಿರಿಯೆ.
ಸೂಂಟಿ ಮೀರಿ ಕಷಾಯನ್ನ ಈಯೇನದೇ
ತಮೆರಿ ಮೀರಿ ಪೊಣ್ಣುಂದುಂಡಲ ಈಯೆನದೇ”
(ಹಲ್ಲು ಮುರಿದ ಅಹಂಕಾರಿ ಎಂದರೆ ನೀನೇನಾ ಸಿರಿಯೆ
ಶುಂಠಿ ಹೆಚ್ಚಾದ ಕಷಾಯ ಎಂದರೆ ನೀನೇನೇ
ತವರ ಭಯ ಇಲ್ಲದ ಹೆಣ್ಣೆಂದರೂ ನೀನೇನೇ?)

ಆಗ ಸಿರಿ ಅದೇ ಮಾತುಗಳನ್ನು ಪುನರುಚ್ಛರಿಸುತ್ತಾ “ನಾನೇ” ಎನ್ನುತ್ತಾ ವಿಚ್ಚೇದನ ಕೇಳುತ್ತಾಳೆ. ಇಲ್ಲೂ ತಮೆರಿಯನ್ನು ಕೇಳುವಾಗ ಸಿರಿಯು ಕೈಯ ಬಳೆ, ಮೂಗಿನ ಮುತ್ತೈದೆತನ, ಕತ್ತಿನ ಕರಿಮಣಿ, ಹಣೆಯ ಕುಂಕುಮ ಅಳಿಸಿ “ನೀವು ಗಂಡಿಗೆ ಗಂಡು ಸರಿ ಬಂಟನೇ (ವೀರ ಎಂಬರ್ಥದಲ್ಲಿ) ಆದರೆ ಬರ ನೀಡಿ ನನ್ನ ಕೈಸೆರಿ ಬಿಡಿಸಿ” ಎನ್ನುತ್ತಾಳೆ. (ಪು.104)

ಪುಟ್ಟು ಬಳಕೆಯ ಪಾಡ್ದನಗಳಲ್ಲಿಯ ಕ್ಷೇಮ ಕಲ್ಲ ಪಂಜುರ್ಲಿ ಕಥೆಯಲ್ಲಿ ಸಿರಿಯ ಈ ಕಥಾ ಭಾಗ ಇದೆ. ಈ ಕಥೆಯಲ್ಲಿ ಸಿರಿ ವಿಚ್ಛೇದನ ಕೇಳುವಾಗ ಸಿರಿಗೆ ಬೈನುಡಿಗಳನ್ನು ಹೇಳುತ್ತಾನೆ ಗಂಡ ಕಾಂತುಪೂಂಜ:
 `ಓ ಏರ್‍ಯಾ ಈ ಸಮೇರಿ ಮೀರಿನ ಪೊಣ್ಣುಲ ಈಯೆಯೆ
 ಓ..ಸಂಬಾರೊ ಮೀರಿನ ಕಜ್ಜಿಪ್ಪು ಈಯಿಲಾ
ಇಲ್ಲಗ್ ಮೀರಿನ ಮುಟ್ಟಿಕಲ್ಲ್ ಓ..ಏರ್‍ಯಾ ಈಯಾಂಡ
ಸಮೇರಿ ಕೊನೊದು ಬಲ್ಲಂದ್ ಪನ್ನಗಾಯೆ’ (ಬಿ.ಎ. ವಿವೇಕ ರೈ ಯದುಪತಿ ಗೌಡ ರಾಜಶ್ರೀ ಪು.84)
(ಯಾರೇ ಸಮೆರಿ (ಸೋದರ ಪುರುಷ)ಮೀರಿ ನಡೆಯುವ ಹೆಣ್ಣು ನೀನೆಯೇ
ಸಾಂಬಾರ ಮೀರುವ ಪಲ್ಯ ನೀನಾ
ಮನೆಗೆ ಮೀರಿದ ಮೆಟ್ಟಲು ಓ ಯಾರದು ನೀನೇಯಾ?
ತವರ ರಕ್ಷಕ (ತಮೆರಿ) ಕರೆದು ತಾ ಎನ್ನುವಾಗಯೇ ) ಎನ್ನುತ್ತಾನೆ.


ಗಂಡ ತಮೆರಿಯನ್ನು ಕೇಳುವಾಗ ಮೊದಲು ಬೇಲಿಯ ಗೂಟ ತೆಗೆದು ಅದನ್ನು ‘ತಮೆರಿ’ ಸ್ಥಾನಕ್ಕೆ ನಿಲ್ಲಿಸುತ್ತಾಳೆ. ಗಂಡ ತಮೆರಿ ಇಲ್ಲದವಳು ಎಂದು ಹಂಗಿಸುವಾಗ ತಾನು ಹೆತ್ತ ಮಗನನ್ನೆ ತನ್ನ ತಮೆರಿ ಎಂದು ಮುಂದೊಡ್ಡುತ್ತಾಳೆ. ಆಗ “ನನಗೆ ಜನಿಸಿದ ಮಗುವನ್ನು ನನ್ನ ಮುಂದೊಡ್ಡಿದೆಯಾ?” ಎನ್ನುತ್ತಾ ಆತ ಕಾಲು ನೋಯುವಷ್ಟು ಸಿರಿಗೆ ಒದೆಯುತ್ತಾನೆ, ಕೈ ನೋಯುವಷ್ಟು ಸಿರಿಗೆ ಹೊಡೆಯುತ್ತಾ ನೀನು ಆರ್ಯ ಬನ್ನಾಯ ಬಳಿ ಹೇಳು, ಪುತ್ತ ಬನ್ನಾರರ ಬಳಿ ಕಟ್ಟು ಎನ್ನುತ್ತಾನೆ” ಈ ಸಂದರ್ಭದಲ್ಲಿ ಸಿರಿ ಕೈಯ ‘ಕೊಂಕೆ ಬಳೆ’ (ಕೊಕ್ಕೆ ?)ತೆಗೆದು, ಕತ್ತಿನ ಕರಿಮಣಿ ತೆಗೆದು, ಮೂಗಿನ ಮುತ್ತೈದೆತನವನ್ನು ಕಳಚಿ, ಆರ್ಯಬನ್ನಾಯ ಬಳಿ ಹೇಳಿ, ಪುತ್ರಬನ್ನಾಯ ಬಳಿ ಕಟ್ಟಿ ಅಲ್ಲಿಂದ ಅಜ್ಜನ ಹರಕೆ ತೀರಿಸಲು ಹೊರಡುತ್ತಾಳೆ.”  ಬೇರೆ ಪಾಡ್ದನ ಪಠ್ಯಗಳಲ್ಲಿ ಕಾಂತು ಪೂಂಜ ಮಡದಿಗೆ ಹೊಡೆಯುವ ಚಿತ್ರಣ ಇಲ್ಲ.
ಮುಂದೆ ಲೋಕನಾಡಿಗೆ ಹರಕೆ ಹಾಕಲು ಹೋಗುತ್ತಾಳೆ. ಅಲ್ಲಿ ಅರ್ಚಕ ಪೂಜೆ ಮುಗಿಸಿ ಹೋಗುವಾಗ ಎದುರಾದ ಸಿರಿಯನ್ನು ಹೆಣ್ಣೆಂದು ಹಂಗಿಸಿ ಅವಮಾನಿಸುತ್ತಾನೆ. ಬೇರೆ ಬೇರೆ ಪಾಡ್ದನಗಳಲ್ಲಿ ಭಿನ್ನ ನಿರೂಪಣೆ ಇದೆ.
“ಒಲ್ತು ಬತ್ತಿನಾ ಓ ಸರ್ಕಾರಾ ಇಜ್ಜಿಂದೀ ಓ ಸರ್ಕಾರ ಕುದುರೆಲು ನಿಕುಲೂ ......
ಅಯ್ಯೋ ಪಯ್ಯೊಲಿದ ಪೊನ್ನುಲು ನಿಕುಲೂ
ವಾ ಊರು ದೆತ್ತ್‍ದ್ ಬತ್ತರಪ್ಪಾ .....
ಒವ್ವೊಂಜಿ ಊರು ದೆಪ್ಯರೆ ಪೋಪಿನಕುಲೂ
ಒವ್ವೊಂಜಿ ಇಲ್ಲ್ ದೆತ್ತರ್ ನಿಕುಲುಂದೂ
ಪೊನ್ನುಲೆಗೇ ಇನಿ ಸುಡುಸುಡುತ್ತಾ ಉತ್ತರೋ ಕೊರ್ಪೆನಪ್ಪೊ ಬಟ್ಟೇ.......” (ಅಶೋಕ ಆಳ್ವ ಪು. 204)
(ಎಲ್ಲಿಂದ ಬಂದ ಓ ಲಗಾಮು ಇಲ್ಲದ ಕುದುರೆಗಳು ಲಗಾಮು ಕುದುರೆಗಳು ನೀವು
ನಾಗ ನರ್ತನದ ಹೆಣ್ಣುಗಳು ನೀವು
ಯಾವ ಊರು ನಾಶ ಮಾಡಿ ಬಂದಿರಪ್ಪ......
ಯಾವ ಊರು ನಾಶ ಮಾಡಲು ಹೊರಟವರು
ಯಾವೊಂದು ಮನೆ ತೆಗೆದಿರಿ (ನಾಶ ಮಾಡಿದಿರಿ) ನೀವು ಎಂದು
ಹೆಣ್ಣುಗಳಿಗೆ ಕಟು ಉತ್ತರ ಕೊಡುತಾನೆ ಭಟ್ಟಾ )
ಎಲ್ಲಾ ಪಾಡ್ದನಗಳಲ್ಲಿ ಲಂಕೆ ಲೋಕನಾಡಿನ ಅರ್ಚಕ ಮತ್ತು ಓಡದ ಕುಂಞನು ಸಿರಿಗೆ ಅವಮಾನಿಸುವ ಸನ್ನಿವೇಶಗಳ ನಿರೂಪಣೆ ಇದೆ.

ಪಿತೃ ಸಂಸ್ಕøತಿಯೊಂದಿಗೆ ಮಾತೃ ಸಂಸ್ಕøತಿಯ ಮುಖಾಮುಖಿ
ಪಿತೃಸಂಸ್ಕøತಿಯ ನಿಕಷದಲ್ಲಿ ಇಟ್ಟು ಇತ್ತೀಚೆಗೆ ಸಿರಿ ಪಠ್ಯವನ್ನು ತುಲನೆ ಮಾಡುವ ಸ್ತ್ರೀ ಪುರುಷ ವಿಮರ್ಶಕರ ಸಂಖ್ಯೆ ಹೆಚ್ಚಾಗಿದೆ. ಇಂತಹ ವಿಮರ್ಶಕರಲ್ಲಿ ಮಾತೃ ಸಂಸ್ಕøತಿಯ ಪರಿಚಯ ಇರುವವರು, ಅಧ್ಯಯನ ಮಾಡಿದವರು ಕಡಿಮೆ.
ಕೆಲವು ಪಾಡ್ದನಗಳಲ್ಲಿ ಕುಮಾರ ತನ್ನ ತಾಯಿಯನ್ನು ಪ್ರಶ್ನಿಸುವ ಪ್ರಸಂಗ ಇದೆ. ಸಿರಿ ಬೋಳಬಾರಿ ಕ್ಷತ್ರಿಯರ ಸೋದರಿಯಾಗಿ ಬೋಲದರಮನೆಗೆ ಹೋಗೋಣ ಎಂದಾಗ ಕುಮಾರ `ಒಬ್ಬ ತಂದೆಗೆ ಹುಟ್ಟಿ ಮತ್ತೊಂದು ತಂದೆಯನ್ನು ತಂದೆ ಎನ್ನಲಾರೆ’É ಎನ್ನುತ್ತಾನೆ. ಈ ವಿಷಯಗಳೆಲ್ಲ ಪಿತೃ ಸಂಸ್ಕøತಿಯಿಂದ ಪ್ರೇರಿತವಾದ ಅಂಶÀಗಳು.  ಮಾತೃ ಸಂಸ್ಕøತಿಯಲ್ಲಿ ವಿಚ್ಚೇಧನ ಮರುಮದುವೆ ಮಾನ್ಯ ಇಂತಹ ಅಸಂಬದ್ಧ ಧೋರಣೆಗಳು ವೈದಿಕ ಸಮಾಜದ ಪಿತೃ ಪ್ರಧಾನತೆಯ ಪ್ರಭಾವವನ್ನು ತೋರಿಸುತ್ತದೆ.

ಸಿರಿಯ ನಡತೆಯ ಮೌಲ್ಯ ಮಾಪನವನ್ನು ಪಿತೃಸಂಸ್ಕøತಿಯ ಸಮಾಜ ಪದ್ಧತಿಯ ನೆಲೆಯಿಂದ ಮಾಡಲಾಗುತ್ತದೆ.
ರಾಮಕ್ಕ ಮುಗೇರ್ತಿ ಅವರ ಸಿರಿ ಪಾಡ್ದನದ ಪ್ರಸ್ತಾವನೆಯಲ್ಲಿ ನಾವಡ ಅವರು, “ಸಿರಿಯ ಕೌಟುಂಬಿಕ ಸಾಮಾಜಿಕ ಸಂದರ್ಭ, ವಿಚ್ಛೇದನ, ಮರು ಮದುವೆ, ಉತ್ತರಾಧಿಕಾರತ್ವ, ಸ್ತ್ರೀತ್ವ ಮತ್ತು ಪರಿಶುದ್ಧತೆಯ ಕಲ್ಪನೆಗಳು, ಗಂಡಿನ ಮೋಸ ಅನ್ಯಾಯ, ಪುರುಷ ಪ್ರಭುತ್ವದ ಹೇರಿಕೆಯ ಪ್ರಯತ್ನಗಳು, ಅದರ ವಿರುದ್ಧ ಹೆಣ್ಣಿನ ಹೋರಾಟ ಮತ್ತು ವಿಜಯಗಳು ದಾಖಲಾಗಿವೆ” ಎನ್ನುತ್ತಾರೆ. (ಪು.53)
ಲಭ್ಯ ಇರುವ ಎಲ್ಲಾ ಸಿರಿ ಪಾಡ್ದನಗಳನ್ನು ಅವಲೋಕಿಸಿದರೂ ಎಲ್ಲೂ ಸಿರಿ ವಿಜಯ ಸಾಧಿಸುವುದಿಲ್ಲ. ಆದರೆ ಆಕೆ ಸೋಲುವುದಿಲ್ಲ,s ಧೃತಿಗೆಡುವುದಿಲ್ಲ. ಸಿರಿಯ ವೈಶಿಷ್ಟ್ಯ ಇರುವುದು ಆಕೆಯು ಪರಿಸ್ಥಿತಿಯನ್ನು ಎದುರಿಸಿದ ಬಗೆಯಲ್ಲಿ.

ಪಿತೃಪ್ರಧಾನತೆಯ ಪ್ರಬಾವ ಸಿರಿ ಪಾತ್ರಿಗಳ ಮೇಲೆ, ಸಿರಿ ಪಠ್ಯದ ಪಾಡ್ದನಕಾರರ ಮೇಲೆ ಆಗಿರುವುದು ಸಹಜ. ನಾನು ನೋಡಿದಂತೆ ತಾಯಿ ಸಿರಿಯನ್ನು ಕಟು ಮಾತುಗಳಿಂದ ನಿಂದಿಸಿ ಮಾತನಾಡಿದ ಅಬ್ಬಗ-ದಾರಗ (ರಮಾ-ರಮಣಿ) ಅವಳಿಗಳ ಪಾತ್ರಿಗಳು ಮುಂಬಯಿವಾಸಿಗಳು. ಬಾಲ್ಯದಲ್ಲಿಯೇ ಸಿರಿಯ ಆಕರ್ಷಣೆಗೆ ಒಳಗಾದ ಇವರು ಪ್ರತಿವರ್ಷ ಸಿರಿ ದಶರ್Àನ ನಿಲ್ಲಲು ಮುಂಬಯಿಯಿಂದ ಬರುತ್ತಾರೆ. ಸಹಜವಾಗಿ ಇವರ ಮೇಲೆ ಪಿತೃ ಸಂಸ್ಕøತಿ ಪ್ರಭಾವ ಆಗಿರುತ್ತದೆ.

ಕೊನೆಯದಾಗಿ ಕುಟುಂಬ ಸಿರಿ ಪಾಡ್ದನ ರಚನೆಯಾದ ಕಾಲಘಟ್ಟ ಯಾವುದಿರಬಹುದು ಎಂಬ ಪ್ರಶ್ನೆ ತುಳುನಾಡಿನ ಇತಿಹಾಸ ಓದಿದಾಗ ಸಹಜವಾಗಿ ಏಳುತ್ತದೆ. ಹದಿಮೂರನೆಯ ಶತಮಾನದಲ್ಲಿ ಆಳುಪರಾಣಿ ಬಲ್ಲಮಹಾದೇವಿ ತುಳುನಾಡನಲ್ಲಿ ಒಡ್ಡೋಲಗಗೊಟ್ಟು ರಾಜ್ಯಭಾರ ಮಾಡಿದ್ದಾಳೆ. ಅವಳ ನಂತರ ಹೊಯ್ಸಳ 3ನೆಯ ಬಲ್ಲಾಳನ ರಾಣಿ ಆಳುಪರಸಿ ಕಿಕ್ಕಾಯಿ ತಾಯಿ ತುಳುನಾಡಿನಲ್ಲಿ ಆಳ್ವಿಕೆ ನಡೆಸಿದ್ದಾಳೆ. ಉಳ್ಳಾಲದ ರಾಣಿ ಅಬ್ಬಕ್ಕ ಮಾತ್ರವಲ್ಲ ಇನ್ನೂ ಅನೇಕ ರಾಣಿಯರು ಸಿರಿ ನೆಲೆಸಿದ್ದ ನಾಡಿನಲ್ಲಿ ರಾಜ್ಯಭಾರ ಮಾಡಿದ್ದಾರೆ. ಇವರಲ್ಲಿ ಕೆಲವರು ಪತಿಯ ಮನೆಯಲ್ಲೂ ಕೆಲವು ಕಾಲ ನೆಲಸಿದ್ದಾರೆ. ಅಂತಹ ಮಹಿಳಾ ಪ್ರಧಾನ ಅಥವಾ ಮಾತೃಪ್ರಧಾನ ಸಾಮಾಜಿಕ ಹಿನ್ನೆಲೆಯ ತುಳುನಾಡಿನಲ್ಲಿ ಹುಟ್ಟಿದ ಸಿರಿ ಕಥೆಯಲ್ಲಿ ಪುರುಷಪ್ರಧಾನತೆ ಇಷ್ಟೊಂದು ಮಟ್ಟಿಗೆ ವಿಜೃಂಭಿಸಬೇಕಾದರೆ ಅದನ್ನು ಅಷ್ಟೇ ಗಟ್ಟಿ ದನಿಯಿಂದ ಸಿರಿಯು ಪ್ರತಿಭಟಿಸಬೇಕಾದರೆ ಸಿರಿಯ ಪಾಡ್ದನ ಕಟ್ಟಿದ್ದ ಕಾಲ ಬ್ರಿಟಿಷ್ ಸರಕಾರದ ಕಾಲ ಇರಬಹುದೋ ಏನೋ ಅನುಮಾನ ಹುಟ್ಟುತ್ತದೆ. ಆದ್ದರಿಂದಲೇ ಸಿರಿ ಕಥೆಯಲ್ಲಿ ಇಲ್ಲಿ ಸ್ತ್ರೀ ಪ್ರಧಾನ  ಸಂಸ್ಕøತಿ ಮತ್ತು ಪುರುಷ ಪ್ರಧಾನ ಸಂಸ್ಕøತಿಯ ನಡುವೆ ಘರ್ಷಣೆ ನಡೆದಿದೆ.

ಸಿರಿಯ ಕಥೆಯ ಆರಂಭದಲ್ಲಿಯೇ ಬ್ರಾಹ್ಮಣ ವೇಷಧಾರಿ ಬೆರ್ಮರ ಪ್ರವೇಶ ಆಗುವುದು, ಲಂಕೆ ಲೋಕನಾಡನ್ನು ಜೀರ್ಣೊದ್ದಾರ ಮಾಡಲು ಬೆರ್ಮಾಳುವಗೆ ಒತ್ತಡ ಹೇರುವುದು ಮತ್ತು ಲಂಕೆ ಲೋಕನಾಡಿನಲ್ಲಿ ಬ್ರಾಹ್ಮಣ ಅರ್ಚಕ ಇರುವುದು -ಇವು ಸಮಕಾಲೀನ ಸಮಾಜದಲ್ಲಿಯೂ ನಡೆಯುತ್ತಿರುತ್ತಿದೆ. ಆದರೂ ಈಗಲೂ ಹೆಚ್ಚಿನ ಕಡೆ ಸಿರಿ ಬಳಗದ ಅರ್ಚಣೆ ಬ್ರಾಹ್ಮಣೇತರರಿಂದ ನಡೆಯುತ್ತಿದೆ ಆದರೂ ಸಿರಿ ಪಾಡ್ದನದಲ್ಲಿ ಬ್ರಾಹ್ಮಣ ಅರ್ಚಕ ಇದ್ದಾನೆ.

ಕೊನೆಯದಾಗಿ ಮಾತೃ ಸಂಸ್ಕøತಿಯ ದೈವೀಶಕ್ತಿ ಸಿರಿ ಗಂಡನಿಂದ ಕ್ರೌರ್ಯಕ್ಕೆ ಒಳಗಾಗುವ ಚಿತ್ರಣ ಸಿರಿ ಕಾವ್ಯದಲ್ಲಿದೆ. ಸಿರಿಯ ಗಂಡ ಸೂಳೆ ಸಿದ್ದುನ ಸಂಗ ಮಾಡಿದ್ದನ್ನು ಮರೆಯುತ್ತಾಳೆ. ಹೆರಿಗೆಯ ನಂತರ ಗಂಡ ತನ್ನನ್ನು ನೋಡಲು ಬಾರದೆ ಇದ್ದಾಗ ಗಂಡನಿಗೆ ಓಲೆ ಕಳುಹಿಸುತ್ತಾಳೆ. ಸಿರಿ ಗಂಡನ ತಪ್ಪನ್ನು ಕ್ಷಮಿಸಿದರೂ `ಸಿರಿ ಪೂಸೀರೆ’ ನಿರಾಕರಿಸಿದುದನ್ನು ಮರೆಯಲು ಕಾಂತುಪೂಂಜ ಸಿದ್ಧನಿರಲಿಲ್ಲ. ಸಿರಿಯನ್ನು ಅವಳ ಸತ್ಯನಾಪುರದ ಆಸರೆಯಿಂದ ಹೊರಹಾಕಬೇಕು, ಆಕೆಯ ಸತ್ಯನಾಪುರ ಅನ್ಯರ ಪಾಲಾಗಬೇಕು, ಆಕೆ ನಿರ್ಗತಿಕಳಾಗಿ ತನ್ನ ಬಳಿ ಬರಬೇಕು, ಆಗ ಆಕೆಯ ಸೊಕ್ಕು ಮುರಿಯಬೇಕು ಎಂಬಿತ್ಯಾದಿ ದುರಾಲೋಚನೆಯಿಂದ ಸತ್ಯನಾಪುರವನ್ನು ಸಿರಿಯ ಕೈ ತಪ್ಪುವಂತೆ ಕಾಂತುಪೂಂಜ ತಂತ್ರ ಹೂಡುತ್ತಾನೆ. ಗಂಡನ ಅನಾಚಾರಗಳನ್ನು ಕಂಡು ರೋಸಿ ಹೋಗಿದ್ದ ಸಿರಿ, ಅಂತಹ ಗಂಡನೇ ಬೇಡ ಎಂಬ ನಿರ್ಣಯಕ್ಕೆ ಬರುತ್ತಾಳೆ. ಆಕೆಯ ಈ ನಿರ್ಣಯದ ಹಿಂದೆ ಹೆಣ್ಣಿನ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಮಾತೃ ಸಂಸ್ಕøತಿಯ ಶಕ್ತಿ ಇದೆ. ಗಂಡ ನೀಡುವ ಹಿಂಸೆಯನ್ನು ಸಹಿಸಿ ಹೆಂಡತಿ ಆತನೊಂದಿಗೆ ಬಾಳಬೇಕಾಗಿಲ್ಲ ಎಂಬ ಪಾಠ ಇದೆ.  ಜೊತೆಗೆ ಗಂಡನು ಹೆಂಡತಿಯನ್ನು ತೊತ್ತಾಗಿ ಕಾಣಬಾರದು ಎಂಬ ಸಂದೇಶ ಇದೆ. ಗಂಡ ಮಡದಿಗೆ ಹಿಂಸೆ ನೀಡಿದರೆ ಮಡದಿಯ `ತಮೆರಿ`ಗಳು ತವರಿಗೆ ಕರೆಸಿಕೊಳ್ಳುವ ಸಾಮಾಜಿಕ ಪದ್ಧತಿ ತುಳು ಸಂಸ್ಕøತಿಯಲ್ಲಿ ಇದೆ. ಅಳಿಯ ಕಟ್ಟು ಕಟ್ಟಲೆಯಲ್ಲಿ ಹೆಣ್ಣು ಗಂಡನ ಮನೆಯಲ್ಲಿ ತೊತ್ತಾಗಿ ಬಾಳಬೇಕಿಲ್ಲ. ಆಕೆಯನ್ನು ತವರಿನ ತಮೆರಿ ತವರಿಗೆ ಕರೆಸಿಕೊಳ್ಳಬೇಕು ಎಂಬ ನಿರೂಪಣೆÉ ಇದೆ. ಅವಳಿಗೆ ತವರಿನ ಬಾಗಿಲು ತೆರೆದಿರುತ್ತದೆ. ತವರಿನಲ್ಲಿ ಆಕೆ ಅಧಿಕಾರದ ಮಗಳು.

ಸಿರಿ ಬರ ನೀಡಿ ಗುರಿ ಇಲ್ಲದ ಹೆಜ್ಜೆ ಇಟ್ಟು ನಡೆಯುವಾಗ, ಎದುರಾದ ಎಲ್ಲಾ ಜಾತಿ ಮತದ ಮಹಿಳೆಯರಿಗೆ ವರ, ತೊಂದರೆ ಕೊಟ್ಟ ಪುರುಷರಿಗೆ ಶಾಪ ನೀಡುತ್ತಾ ನಡೆಯುತ್ತಾಳೆ. ತನ್ನ ಗಂಡನ ಸೂಳೆ ಸಿದ್ದುಗೂ ವರ ನೀಡುತ್ತಾಳೆ. ಸೂಳೆಗಾರಿಕೆಯೂ ಸಾಂದರ್ಭಿಕ ಅನಿವಾರ್ಯತೆ ಎಂಬ ಸೂಚನೆಯನ್ನು ಈ ಪಠ್ಯದಲ್ಲಿ ಸಿಗುತ್ತದೆ.




ಡಾ. ಇಂದಿರಾ ಹೆಗ್ಗಡೆ

No comments:

Post a Comment