Wednesday, August 26, 2015

ರಾವಣನ ಕನಕ ಲಂಕೆಯಲ್ಲಿ ಒಕ್ಕೆಲಕಲೆ ಪೊಂಜೊವು..... ಭಾಗ 2





ಶ್ರೀಲಂಕಾದ ಪರಂಪರಾಗತ ಕಥೆ

ಸುಮಾರು ಕ್ರಿ.. 4ರಲ್ಲಿ ಭಾರತದಲ್ಲಿ ಸಿಂಗಬಾಹು ಎಂಬ ರಾಜನಿದ್ದ. ಅವನಿಗೆ ಒಬ್ಬ ಹಾದಿ ತಪ್ಪಿದ ಮಗ ಇದ್ದ. ಅವನನ್ನು ಸರಿ ದಾರಿಗೆ ತರಲು ರಾಜ ಮಾಡಿದ ಪ್ರಯತ್ನ ಫಲಕಾರಿಯಾಗಲಿಲ್ಲ. ಕೊನೆಗೆ ಮಗನನ್ನು ರಾಮೇಶ್ವರದಿಂದ ಗಡೀಪಾರು ಮಾಡುತ್ತಾನೆ. ಗಡಿಪಾರು ಆದ ಮಗ ರಾಮೇಶ್ವರದಿಂದ 36 ಕಿಲೋಮೀಟರ್ ದೂರ ಇದ್ದ ಶ್ರೀ ಲಂಕಾದ ಮನ್ನಾರ್ಗೆ ಸಮುದ್ರದ ಮೂಲಕ ಬಂದು ತಲುಪುತ್ತಾನೆ. ಇಲ್ಲಿ ನೀರಿನ ಭಾಗ ಈಗಲೂ 6 ಕಿಲೋ ಮೀಟರ್. (ಇಲ್ಲಿಯೇ ಶ್ರೀ ರಾಮ ಸೇತುವೆ ಕಟ್ಟಿದ್ದ ಎಂಬ ನಂಬಿಕೆ) ಕಾಲದಲ್ಲಿ ಶ್ರೀಲಂಕಾದಲ್ಲಿ Demon class ಇದ್ದರು. (ಸ್ಥಳೀಯ ಮೂಲ ನಿವಾಸಿಗಳು) The aboriginal inhabitants of the island’ - ನಮ್ಮ ಗೈಡ್ Demon class ಎಂಬ ಪದವನ್ನು ಮತ್ತೆ ಮತ್ತೆ ಪ್ರಯೋಗಿಸಿದ್ದಾನೆ) ಅವರ ಮಹಿಳೆಯರು ರೂಪವಂತರಾಗಿದ್ದರು. ಕಾಡುವಾಸಿಗಳ ರಾಜಕುಮಾರಿಯನ್ನು ಭಾರತದ ಅರಸನ ಮಗ ಮದುವೆಯಾಗುತ್ತಾನೆ. ವಿಷಯ ಭಾರತದಲ್ಲಿ ಇರುವ ತಂದೆಗೆ ತಿಳಿಯಿತು. ಆತ ಶ್ರೀಲಂಕಾಗೆ ಬಂದು ಮಗ ಮದುವೆಯಾದ ಮೂಲ ನಿವಾಸಿಯ ಹೆಣ್ಣ್ಣು ಮತ್ತು ತಂಡದವರನ್ನು (Demon class )ಕಾಡಿಗೆ ಓಡಿಸಿ ಮಗನಿಗೆ ಭಾರತೀಯ ಹುಡುಗಿಯನ್ನು ಮದುವೆ ಮಾಡಿಸುತ್ತಾನೆ. ಮೂಲ ನಿವಾಸಿಗಳು ಕ್ಯಾಂಡಿಯ ಕಾಡಿನ 100 ಕಿಲೋಮೀಟರ್ ಒಳಭಾಗಗಳಲ್ಲಿ ಇಂದಿಗೂ ಇದ್ದಾರೆ.’ ಇದು ಇಲ್ಲಿಯ ಮೂಲನಿವಾಸಿಗಳ ಕಥೆ.
ರಾಮಾಯಣದ ಪ್ರಕಾರ ಶ್ರೀ ಲಂಕಾದಲ್ಲಿ ರಾಕ್ಷಸರು ಇದ್ದರು. ಈತ ಹೇಳುವ Demon class ಎಂಬ ಪದ ಹೇಗೆ ಮತ್ತು ಯಾಕೆ ರೂಢವಾಯಿತು? ಅದೂ ಸ್ಥಳೀಯರು ಪದ ಯಾಕೆ ಪ್ರಯೋಗಿಸುತ್ತಾರೆ? ಇವೆಲ್ಲ ಪ್ರಶ್ನೆಗಳು ನನ್ನಲ್ಲಿ ಗುಂಯ್ಗುಟ್ಟತೊಡಗಿತು. ಇಲ್ಲಿಯ ಮೂಲನಿವಾಸಿಗಳ ಹೆಣ್ಣು ಮಕ್ಕಳು ರೂಪವಂತರು ಎನ್ನುತ್ತಾನೆ ಕನಾಲ್. ಸೌಂದರ್ಯಶೀಲ ಸಮಾಜವನ್ನು Demon class ಎಂದು ಕರೆಯಲು ರಾಮಾಯಣ ಪ್ರಭಾವ ಬೀರಿರಬಹುದೆ? ಶೂರ್ಪನಖಿಯೂ ಶ್ರೀ ರಾಮನಲ್ಲಿ ಮದುವೆ ಪ್ರಸ್ತಾಪ ಇಡಲು ಬಂದಾಗ ಸುಂದರಿಯಾಗಿಯೇ ಇದ್ದಳು. ಅವಳನ್ನು ಲಕ್ಷ್ಮಣ ವಿರೂಪಗೊಳಿಸಿದ್ದು ಮುಂದಿನ ಹೆಜ್ಜೆ. ಮಂಡೋದರಿ ಸೌಂದರ್ಯದಲ್ಲಿ ಸೀತೆಯನ್ನು ಮೀರಿದ್ದಳು. ಹೀಗೆ ಪ್ರಶ್ನೆಗಳು ನನ್ನನ್ನು ಮುತ್ತಿಕ್ಕಿದ್ದುವು.

Our local Driver

ರಾಮಾಯಣ ಕಾಲದಲ್ಲಿ ಶ್ರೀ ರಾಮ ಆಕ್ರಮಣ ಮಾಡಿ ಲಂಕೆಯರನ್ನು ಸೋಲಿಸಿದ್ದರೆ ಮುಂದೆ ಚೋಳರೂ ಉತ್ತರದ ಕಡೆಯಿಂದ ಅದರಲ್ಲೂ ಅನುರಾಧಪುರಕ್ಕೆ ಪದೇ ಪದೇ ಆಕ್ರಮಣಮಾಡಿದ್ದರು. ಅವರ ಭಯದಿಂದ ಬುದ್ಧನ ದಂತ ಇರುವ ಕರಂಡಕ ಹಾಗೂ ರಾಜಧಾನಿ ಮತ್ತು ಅರಮನೆ ದಕ್ಷಿಣ ಭಾಗಕ್ಕೆ ಸ್ಥಳಾಂತರವಾಯಿತು. ಬಹುಷ ಆಗಿನ ಕಾಲದಲ್ಲಿ ಭಾರತದಿಂದ ಶ್ರೀ ಲಂಕಾಗೆ ಸಮುದ್ರದ ಮೂಲಕ ಸುಲಭದಲ್ಲಿ ಬರಬಹುದಿತ್ತು. ವ್ಯಾಪಾರಕ್ಕಾಗಿ ಅರಬ್ಬರೂ ಇಲ್ಲಿಗೆ ಬಂದು  ಕರಾವಳಿಯಲ್ಲಿ ನೆಲೆಸಿದ್ದರು. ಮುಂದೆ ಪೋರ್ಚುಗೀಸರ ಮತ್ತು ಬ್ರಿಟಿಷರ ಆಕ್ರಮಣಕ್ಕೆ ಹೆದರಿ ಅವರು ಒಳನಾಡುಗಳಿಗೆ ಚದುರಿದರು. ಅವರೇ ಈಗಿನ ಮುಸ್ಲಿಮರು. ಇವರನ್ನು ಸ್ಥಳೀಯವಾಗಿಮರಕಾಲರುಎಂದು ಕರೆಯುತ್ತಾರೆ. ಸಿಂಹಳೀ ಭಾಷೆಯಲ್ಲಿ ಮೀನುಗಾರರನ್ನುಮಾಲುಎನ್ನುತ್ತಾರೆ.
ಬ್ರಿಟಿಷರ ಕಾಲದಲ್ಲಿ ಇಲ್ಲಿಗೆ ಬಂದ ತಮಿಳರು ಮತ್ತು ಸಿಂಹಳೀಯರು ಹೊರನೋಟಕ್ಕೆ ಒಂದೇ ರೀತಿ ಕಾಣುತ್ತಾರೆ. ಇಲ್ಲಿಗೆ ಆಂದ್ರದಿಂದಲೂ ವಲಸೆ ಬಂದಿದ್ದು ಅವರನ್ನುಆಂದ್ರ ದಮಿಳರುಎಂದು ಕರೆಯುತ್ತಾರೆ.
ಹುಣಸೆಮರದ ಹೊಟೇಲ್:
ನಮ್ಮ ಬಸ್ಸು ಹುಣಸೆ ಮರದ ಹೋಟೇಲ್ ಬಳಿ ಬಂದು ನಿಂತಿತು.
ಇದು Brown Aeach or Tamarind tree ಹೋಟೇಲ್. ಕೊಲೋಂಬೋ ವಿಮಾನ ನಿಲ್ದಾಣದಿಂದ ಇಲ್ಲಿಗೆ ಸುಮಾರು 20 ನಿಮಿಷದ  ಪ್ರಯಾಣ. ಇಲ್ಲಿ ನಮ್ಮ ಮಧ್ಯಾಹ್ನದ ಊಟದ ವ್ಯವಸ್ಥೆಯಾಗಿತ್ತು. ಪರಿಸgಕ್ಕೂ ನಮ್ಮೂರು ಮಂಗಳೂರಿನ ಹಳ್ಳಿಗಳಿಗೂ ಯಾವ ವ್ಯತ್ಯಾಸವೂ ಇರಲಿಲ್ಲ. ಇಲ್ಲಿ ನಾವೆಲ್ಲ ಗೆಲುವಾದೆವು. ಇದು ಪ್ರವಾಸಿಗಳು ಉಳಕೊಳ್ಳಲು ಹೇಳಿ ಮಾಡಿಸಿದ ಸ್ಥಳ. ಸಣ್ಣ ಸಣ್ಣ ಕಾಟೇಜ್ನಿಂದ ಹಿಡಿದು ಹೆಚ್ಚಿನ ಕೋಣೆಗಳುಳ್ಳ ಕಾಟೇಜುಗಳೂ ಇಲ್ಲಿದ್ದುವು.

ಊಟದ ಬಗೆಗಳನ್ನು ಕಂಡು ನಾವು ಮೂಕವಿಸ್ಮಿತರಾದೆವು. ವಿದೇಶಿಯರು ಒಪ್ಪುವ ಬಗೆಬಗೆಯ ಬ್ರೆಡ್ ಖಾದ್ಯಗಳೊಂದಿಗೆ ನಮ್ಮೂರಿನ ಶ್ಯಾವಿಗೆ, ಮನ್ನಿ ಮುಂತಾದ ಖಾದ್ಯಗಳು ಬಾಯಿಯಲ್ಲಿ ನೀರೂರುವಂತೆ ಜೋಡಿಸಿದ್ದರು. ಎಲ್ಲವನ್ನೂ ರುಚಿನೋಡಿದರೂ ಹೊಟ್ಟೆ ಬಿರಿಯಬಹುದು. ಆದರೂ ಊರ ತಿಂಡಿಗಳ ರುಚಿಯನ್ನು ಸವಿಯಬೇಕಿತ್ತು. ಅದೂ ನಮ್ಮೂರಿನ ಖಾದ್ಯಗಳು ಇವರ ಕೈಯಲ್ಲಿ ಹೇಗೆ ರುಚಿಗೊಂಡಿವೆ? ಎಂಬ ಕುತೂಹಲ. ಸಾಮಾನ್ಯವಾಗಿ ಪಂಚತಾರಾ ಹೋಟೇಲುಗಳ ಊಟ ನೋಡಲು ಚಂದ. ರುಚಿ ಕಡಿಮೆ. ಮನೆಯ ಊಟ ನೋಡಲು ಅಂದವಿರದು. ರುಚಿ ಇರುವುದು ಮನೆಯ ಅಡುಗೆಯಲ್ಲಿ. ಆದರೆ ಇಲ್ಲಿಯ ಅಡುಗೆ ನೋಡಲೂ ಚಂದ ಉಣ್ಣಲೂ ರುಚಿ ಇತ್ತು

No comments:

Post a Comment