ಸಾವು : ತುಳುವರ ಮನೆಯಲ್ಲಿ ಸಾವಾದರೆ ಮುಂದಿನ ಎಲ್ಲಾ ಸಂಪ್ರದಾಯ ಪದ್ಧತಿಗಳು ಬುಡಗಟ್ಟು ಆಚರಣೆಯಲ್ಲಿಯೇ ಮುಂದುವರಿಯುತ್ತಿವೆ. ವೈದಿಕ ಪದ್ಧತಿಯ ಯಾವುದೇ ಆಚರಣೆ ಪೂಜೆಯನ್ನು ಇಲ್ಲಿ ನಡೆಸುವುದಿಲ್ಲ. ಜಾನಪದ ದೈವಗಳಿಗೂ ಪೂಜೆ ಸಲ್ಲಿಸುವ ಪದ್ಧತಿ ಇಲ್ಲ. ಮಣ್ಣಿನಿಂದ ಬಂದ ಮಾನವ ಬೂದಿಯಾಗಿ ಮಣ್ಣಿನಲ್ಲಿ ಐಕ್ಯಆಗಿ ಹೋಗುವ ಪರಂಪರೆ ತುಳುವರದ್ದು. ವ್ಯಕ್ತಿಯನ್ನು ಸುಟ್ಟ ಅನಂತರ ಅವನ ಎಲುಬು ಬೂದಿಯನ್ನು ಮೂರು ಬಾಗ ಮಾಡುತ್ತಾರೆ. ತಲೆಯ ಬಾಗ, ನಡುಬಾಗ, ಕೆಳಬಾಗ ಎಂದು. ಗದ್ದೆಯ ಮಣ್ಣಿನಿಂದ ದೂಪೆ(ಸ್ತೂಪ) ನಿರ್ಮಿಸುತ್ತಾರೆ. ಸ್ಥೂಪದ ಒಳಗೆ ಈ ಮೂರು ಭಾಗದ ಮಣ್ಣು, ಎಲುಬುಗಳನ್ನು ಪೇರಿಸಿ ದೂಪೆ /ಸ್ತೂಪ ತಯಾರಿಸುತ್ತಾರೆ. ದೂಪೆಯ ಮೇಲೆ ತುಳುಸಿ ಗಿಡ ನೆಡುತ್ತಾರೆ. ಅಲ್ಲಿಗೆ ಅದು ವೃಂದಾವನ ಆಗುತ್ತದೆ. (ತುಳುಸಿ ಗಿಡ ವೈದಿಕದ ಪ್ರಭಾವದಿಂದ ಬಳಕೆಗೆ ಬಂದಿರಬಹುದು.)
ಮಳೆಗಾಲದಲ್ಲಿ ಗದ್ದೆ ಉಳುವ ಕಾಲಕ್ಕೆ ಆ ದೂಪೆ ಗದ್ದೆಯ ಕೆಸರಲ್ಲಿ ಕರಗಿ ಹೋಗುತ್ತದೆ. ಈ ಯಾವ ಕ್ರಿಯೆಯಲ್ಲೂ ಬ್ರಾಹ್ಮಣರನ್ನು ಒಳಗೊಳಿಸುವುದಿಲ್ಲ.
ಸುಮಾರು 1970ರ ದಶಕದ ಅನಂತರ ತುಳುವರು ಮನೆಮಂದಿಯ ಸಾವಿನ ಕೊನೆಯಲ್ಲಿ ಸಮುದ್ರದ ದಂಡೆಯಲ್ಲೂ ಸಂಗಮ ಕ್ಷೇತ್ರಗಳಲ್ಲೂ ತಿಲಹೋಮ ಮಾಡಿ ಪಿಂಡ ಹಾಕುವ ಪದ್ಧತಿ ಆರಂಭವಾಗಿರಬೇಕು.